Total Pageviews

Monday, September 19, 2011

"ಏಳು ರೊಟ್ಟಿ" ಗಳ "ಲೈಫು ಇಷ್ಟೇನೆ"


ಎರಡು ವಾರದ ಸುದೀರ್ಘ ವಿರಾಮದ ನಂತರ ಪುನಃ ನಿಮ್ಮ ಮುಂದೆ ಬಂದಿದ್ದೇನೆ. ಬರೆಯಲು ವಿಷಯವೇ ಇರಲಿಲ್ಲವೆಂದಲ್ಲ. ವಿಷಯವಿತ್ತು. ಸಮಯದ ಅಭಾವ ಕಾಡುತ್ತಿತ್ತು. ಅದಿರಲಿ, ನನ್ನ ಪೋಸ್ಟ್ ಗಾಗಿ ಕಾದು, "ಏಕೆ ಏನೂ ಬರೆಯಲೇ ಇಲ್ಲ" ಎಂದು ಕೇಳಿದವರು ಬಹಳ ಕಡಿಮೆ ಸ್ನೇಹಿತರಾದರೂ, ಎಲ್ಲರಿಗೂ ಈ ವಿಷಯವಾಗಿ ಕ್ಷಮೆ ತಿಳಿಸುತ್ತಾ, ವಾರಾಂತ್ಯದಲ್ಲಿ ನಡೆದ "ಏಳು ರೊಟ್ಟಿ"ಗಳ "ಲೈಫು ಇಷ್ಟೇನೆ" ಯ ವಿಮರ್ಷೆ ಬರೆಯುತ್ತಿದ್ದೇನೆ. ಓದಿ ಆನಂದಿಸಿ(!!??) :-)
 
:: ಲೈಫು ಇಷ್ಟೇನೆ ::
 

"When a girl closes her eyes, she sees the person she loves the most. But when a boy does the same there starts a slideshow" ಎಂಬ ಒಂದು ಉಕ್ತಿ ಇದೆ. ಹಾಗೆಂದ ಮಾತ್ರಕ್ಕೆ ಗಂಡು ಮಕ್ಕಳೆಲ್ಲರೂ flirts......ತಮ್ಮ ಹಳೆಯ ಪ್ರೀತಿಯನ್ನು ಮರೆತು ಹೊಸತಿಗೆ ಕೈ ಹಾಕಿ ಪುನಃ ಕೈ ಸುಟ್ಟುಕೊಳ್ಳುತ್ತಾರೆಂದಲ್ಲ. ಪ್ರಾಯಶಃ ಹುಡುಗಿಯರಿಗಿಂತ ಬಹು ಸುಲಭವಾಗಿ ಪ್ರೀತಿಯವಿಷಯದಲ್ಲಿ ಸೋಲೊಪ್ಪಿ ಮತ್ತೊಂದು ಮಹತ್ಸಾಧನೆಗೆ ಮುಂದಾಗುತ್ತಾರೆ ಎನ್ನಬಹುದು. ಬಹುತೇಕ ಇದೇ ಥೀಮ್ ಇಟ್ಟುಕೊಂಡೇ ಪವನ್ ಕುಮಾರ್ ಈ ಚಿತ್ರ ಮಾಡಿದ್ದಾರೆ ಅಂತ ಭಾವಿಸುತ್ತೇನೆ.

ನಾಯಕ ತಾನು ಶಾಲಾ ದಿವಸದಿಂದ ಅನುಭವಿಸಿದ ಪ್ರೀತಿಯ ಮಜಲುಗಳನ್ನು, ತಾನು ಪ್ರೇಮದಲ್ಲಿ ಕಂಡುಕೊಂಡ ಸೋಲು, ಕಳೆದುಕೊಂಡ ಹುಡುಗಿಯರನ್ನು ಮೆಲಕು ಹಾಕುತ್ತಾನೆ ತಲೆಯ ಮಸಾಜ್ ಮಾಡುವ ಅಜ್ಜನಿಗೆ. ಶಾಲೆಯ ದಿನಗಳಲ್ಲಿ ಪ್ರೀತಿಯೇ ಎಂದು ಮೂಗು ಮುರಿಯಬೇಡಿ. ಪ್ರೀತಿ-ಪ್ರೇಮ ಎಂಬ ಮಾಯೆಯ ಬಗ್ಗೆ ಹುಡುಗನಿಗೆ ಅರ್ಥವಾಗುವುದರೊಳಗೆ ತಾನು ಅದನ್ನು ಕಳೆದುಕೊಂಡು  SUCKER, LOSER ಎನಿಸಿಕೊಳ್ಳಲಾರಂಭಿಸುತ್ತಾನೆ. "ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು...... " ಹಾಡು ಈ ಪ್ರಕರಣಗಳ gist ಅಷ್ಟೇ...ಪ್ರತಿ ಬಾರಿಯೂ ಹುಡುಗಿಯನ್ನು ಕಂಡು ಮೋಹಿತನಾಗಿ ಮೊದಲನೆಯ ಬಾರಿ ನಿಜವಾದ ಪ್ರೀತಿ ಅನುಭವಿಸುತ್ತಿದ್ದೇನೆಂದು, "Move on" ಆಗುತ್ತಿದ್ದ ಈ ಸಕರ್ ನ ಜೀವನಗಾಥೆಯೇ ಲೈಫು ಇಷ್ಟೇನೆ. ತನ್ನ ಕಾಲೇಜು ದಿನಗಳಲ್ಲಿ ಕಂಡುಕೊಂಡ ಮತ್ತೊಬ್ಬ ಪ್ರೇಯಸಿ ಅವಳ ತಂದೆಯನ್ನು ಎದುರಿಸಲಾಗದೇ ನಾಯಕನನ್ನು ಬಿಟ್ಟು ಮತ್ತ್ಯಾರನ್ನೋ ಮದುವೆಯಾಗುತ್ತಾಳೆ. ಅವಳ ಮದುವೆಯ ದಿನವೇ ಮತ್ತೊಬ್ಬ ಹುಡುಗಿಯನ್ನು ಇಷ್ಟಪಟ್ಟು, ಅವಳಿಂದಲೂ ದೂರವಾಗುತ್ತಾನೆ. ಕೊನೆಗೆ ನೆಲೆ ಕಂಡುಕೊಳ್ಳುವ ಈ ನಾಯಕ ದುಬೈ ನಲ್ಲಿ ದುಡಿಯಲಾರಂಭಿಸಿ ತನ್ನ ಜೀವನವನ್ನು ತಕ್ಕ ಮಟ್ಟಿಗೆ ರಿಪೇರಿ ಮಾಡಿಕೊಳ್ಳುತ್ತಾನೆ.

ಈ ಚಿತ್ರದಲ್ಲಿ ಖಂಡಿತವಾಗಿಯೂ ಮೆಸೇಜ್ ಇದೆ. ಪವನ್ ಕುಮಾರ್ ರ ನಿರ್ದೇಶನದಲ್ಲಿ ಪ್ರಬುದ್ಧತೆ ಇದೆ. ದಿಗಂತ ತಮ್ಮ ಹಳೆಯ ಎಲ್ಲಾ ಮೂವಿಗಳಿಗಿಂತಲೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸತೀಶ್, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಎಲ್ಲರೂ ಒಳ್ಳೆಯ ಅಭಿನಯ ನೀಡಿದ್ದಾರೆ. ಹೊಸ ಪರಿಚಯ (!??) ಸಂಯುಕ್ತಾ ಬೆಳವಾಡಿ ಅಭಿನಯ, ಡಯಲಾಗ್ ಡೆಲಿವರಿ ಚೆನ್ನಾಗಿ ಮೂಡಿಬಂದಿಲ್ಲ. ರಾಜು ತಾಳಿಕೋಟಿಗೆ ಮೂರ್ನಾಲ್ಕು ಡಯಲಾಗ್ ಮಾತ್ರ ಇರುವುದರಿಂದ ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಬಹುದು. ಮನೋಮೂರ್ತಿಯವರ ಸಂಗೀತ, ಬೊಂಬಾಟ್. ಹಾಡುಗಳ, ಸಿನೆಮಾ ಚಿತ್ರೀಕರಣ ಹೆಚ್ಚಾಗಿ ಬೆಂಗಳೂರಲ್ಲೇ ನಡೆದಿದೆ. ಆದರೆ ಎರಡು ಹಾಡುಗಳಿಗೆ - " ಮಾಯಾವಿ ಮಾಯಾವಿ", "ನಿನ್ನ ಗುಂಗಿನಲ್ಲಿ" ಲಡಾಕ್ ನಲ್ಲಿ ಚಿತ್ರೀಕರಿಸಿದ್ದು ಆ ಹಾಡುಗಳು ಮೆರುಗಿನಿಂದ ಕೂಡಿದೆ. ಮತ್ತೆರಡು ಹಾಡುಗಳಲ್ಲಿ - " ಜೂನಿಯರ್ ದೇವದಾಸ", "ಯಾರಿಗೆ ಹೇಳೋಣ" ಬಂದು ಹೋಗುವ Contemporary dancers - ರಾಕೇಶ್, ಪ್ರಶಾಂತ್, ಅಂಬರೀಶ್ ಒಳ್ಳೆಯ ಪ್ರದರ್ಶನ ನೀಡಿದ್ದಾರೆ.  ಹಾಡುಗಳ ಲಿರಿಕ್ಸ್ ನೀವು perceive ಮಾಡುವ ಹಾಗೆ. ಹಲವರಿಗೆ ಇಷ್ಟವಾಗಿದೆ. ಒಟ್ಟಿನಲ್ಲಿ ಯುವಕರು ನೋಡಬಹುದಾದ ಚಲನಚಿತ್ರ. ಪ್ರಾಯಶಃ ಹಿರಿಯರು ಈ ಚಲನಚಿತ್ರ ನೋಡಿದರೆ "ಶುಭಂ" ಅಂದಾರು, ಆದ್ದರಿಂದ ಅವರ Feedback ತೆಗೆದುಕೊಳ್ಳಬೇಡಿ. ( ಶುಭಂ ಎಂದರೆ ನಿರ್ದೇಶಕರಾದ ಗುರುಪ್ರಸಾದ್ ಪ್ರಕಾರ ಶುದ್ಧ ಭಂಡಲ್ ಎಂದು)

:: ಏಳು ರೊಟ್ಟಿಗಳು ::

ಇನ್ನು ಭಾನುವಾರ ಕೆ. ಎನ್. ಗಣೇಶಯ್ಯನವರ "ಏಳು ರೊಟ್ಟಿಗಳು" ಕಿರುಕಾದಂಬರಿಯನ್ನು ಓದಿ ಮುಗಿಸಿದೆ. ಈ ಕಾದಂಬರಿ ಬಿಡುಗಡೆಯಾದ ಮರುದಿನವೇ ತರಿಸಿಕೊಂಡರೂ ಎಡೆಬಿಡದೆ ಓದಲು ಆಗಿರಲಿಲ್ಲ. ಖಂದಿತವಾಗಿಯೂ ಓದಬಹುದಾದ ಕಾದಂಬರಿ ಇದು. ಹೈದರಾಬಾದಿನ ನಿಜಾಮ - ಉಸ್ಮಾನ್ ಅಲಿ ಖಾನ್ ಎಂಬುವವನ ಕುರಿತಾದ ಈ ಕಾದಂಬರಿ ಕೆ. ಎನ್. ಜಿ ಯವರ ಎಲ್ಲಾ ಕಾದಂಬರಿ, ಕಥೆಗಳ ಹಾಗೆಯೇ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಜಾನ್ ಜುಬೃಜುಕಿಯ "The Last Nizam" ಎಂಬ ಪುಸ್ತಕವನ್ನು ಕುರಿತು ಇವರು ಹೆಣೆದಿರುವ ಕಥೆ ಬಹಳ ರೋಚಕವಾಗಿದೆ. ನಿಜಾಮನು ಬಹಳ ಹಣವಂತನಾಗಿದ್ದು, ಅವನ ಬಳಿ ಹಣ, ಧನಕನಕಗಳು ಎಷ್ಟಿತ್ತೆಂದರೆ ಬ್ರಿಟಿಷರಿಗೂ ಮಹಾಯುದ್ಧದಲ್ಲಿ ಸಾಲ ಕೊಟ್ಟವನು ಈ ಉಸ್ಮಾನ್ ಅಲಿ ಖಾನ್. ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಭಾರತದ ಗೃಹ ಮಂತ್ರಿಯಾಗಿದ್ದಾಗ ಈ princely states ಗಳನ್ನು ಭಾರತಕ್ಕೆ ಸೇರಿಸಿ ದೇಶಕಟ್ಟುವ ಸಂದರ್ಭದಲ್ಲಿ ಈ ನಿಜಾಮ ಮೊಹಮಾದ್ ಅಲಿ ಜಿನ್ನಾನ ಸಹಾಯ ಪಡೆದು ಹೈದರಾಬಾದನ್ನು ಪ್ರತ್ಯೇಕ ದೇಶವನ್ನಾಗಿಸಬೇಕೆಂದು ಆಸೆ ಪಟ್ಟಿದ್ದನಂತೆ. ಕಡೆಗೆ ಆಪರೇಷನ್ ಪೋಲೋ ಅಡಿ ಪಟೇಲರು ಹೈದರಾಬಾದನ್ನು ಭಾರತಕ್ಕೆ ಸೇರಿಸಿಕೊಂಡ ಸಂದಭದಲ್ಲಿ, ಭಾರತ ಬಿಟ್ಟು, ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಹೋಗಿ ಈಜಿಪ್ಟ್ ನಲ್ಲಿ ನೆಲೆಯೂರಬೇಕೆಂಬ ಹುನ್ನಾರ ನಡೆಸಿದ್ದನು. ಭಾರತದ ಸೇನೆ ಇವನ ಸಾಮ್ರಾಜ್ಯದ ಮೇಲೆ ಧಾಳಿ ನಡೆಸುವ ಸಂದರ್ಭದಲ್ಲಿ ನಿಜಾಮ್ ಆಗಲೇ ಕಾಟನ್ ಸಿಡ್ನಿ ಎಂಬ ಅಂತರರಾಷ್ಟ್ರೀಯ ಠಕ್ಕ ನ ಸಹಾಯದಿಂದ ವಿಮಾನಗಳಲ್ಲಿ ಹಣ, ವಜ್ರ-ವೈಢೂರ್ಯಗಳನ್ನು ತುಂಬಿಸಿ ಸಿದ್ಧನಾಗಿದ್ದನು. ತನ್ನ ನಮಾಜ್ ಮುಗಿಸುವ ವೇಳೆಗಾಗಲೆ ಧಾಳಿ ನಡೆದು ಆ ಹಣವೆಲ್ಲ ಸುಟ್ಟುಹೋಗಿರಬಹುದೆಂದು ಕೆಲವರ ನಂಬಿಕೆ. ಮತ್ತೆ ಕೆಲವರ ನಂಬಿಕೆಯಂದರೆ ಈ ಹಣವನ್ನೆಲ್ಲಾ ಆಗಲೇ ಗೋದಾವರಿಯ ನದಿಯ ಬಳಿಯ ಯಾವುದೋ ಕಾಡಲ್ಲಿ ಮುಚ್ಚಿಡಲಾಗಿದೆಯೆಂದು. ನಿಜಾಮ್ ಇಜಿಪ್ಟ್ ಗೆ ಹಾರಲಾಗಲಿಲ್ಲ. ಆದರೆ ನಿಧಿ ಎಲ್ಲೆ ಹೋಯಿತು???? ಆ ನಿಧಿಯಿದ್ದ ಜಾಗದ ಬಗ್ಗೆ ಅಲ್ಪ ಸ್ವಲ್ಪ ತಿಳಿದ ರಜಾಕರು, ಸಿದ್ಧಿಗಳು (ಸಿದ್ಧಿಗಳು Africa ದಿಂದ ನಿಜಾಮ್ ತನ್ನ ರಕ್ಷಣೆಗಾಗಿ ಕರೆಸಿಕೊಂಡು ಸಾಕುತ್ತಿದ್ದ ನಿಷ್ಠಾವಂತ ಸೈನಿಕರು.) ಆ ನಿಧಿಯನ್ನೇನು ಮಾಡುದರು ಎಂಬುದಕ್ಕೆ ಪುರಾವೆಗಳಿಲ್ಲ. ಯಾರು ಆ ಆಸ್ತಿಯನ್ನು ಅನುಭವಿಸುತ್ತಿದ್ದರೆಂಬುದಕ್ಕೆ ಎಲ್ಲೂ ವ್ಯಾಖ್ಯಾನವಾಗಿಲ್ಲ. ಇದರ ಜಾಡನ್ನೇ ಹುಡುಕಿಕೊಂಡು ಹೊರಟ ಮುಂಗೇಪ, ಸರಳ, ವಿನಯ್, ಅನಂತರಾಜು, ಕಲ್ಯಾಣ್ ರ ಕಥೆಯೆ  ಏಳು ರೊಟ್ಟಿಗಳು. ಇದರಲ್ಲಿ ಸಸ್ಪೆನ್ಸ್ ಇದೆ, ಸತ್ಯಗಳಿವೆ, ಪುರಾವೆಗಳಿವೆ, Fiction ಇದೆ ಮೇಲಾಗಿ ನಿಮ್ಮ ೯೫ ರೂ ಗೆ ಮೀರಿದ ಥ್ರಿಲ್ ಇದೆ.

ಏಳು ರೊಟ್ಟಿಗಳು ಓದಿರಿ, ಲೈಫು ಇಷ್ಟೇನೆ ಇಷ್ಟೇನೆ ನೋಡಿರಿ......

ಇಂತಿ ನಿಮ್ಮ,

ಪ್ರ ಕೊ ಪ

Sunday, August 28, 2011

ಹಳೇ ಪ್ಯಾಪರ್, ರದ್ದಿ ಸಾಮಾನ್ ಓಯ್


"ಸ್ಟೀಲ್ ಪಾತ್ರೆ ಸಾಮಾನ್",  "ಹಳೇ ಪ್ಯಾಪರ್, ರದ್ದಿ ಸಾಮಾನ್ ಓಯ್" ಅಂತ ಕೂಗಿಕೊಂಡು ಹೋಗುತ್ತಿದ್ದ ಸೈಕಲ್ ಸವಾರರು ಈಗ ಸಿಟಿಯಲ್ಲಿ ತಕ್ಕ ಮಟ್ಟಿಗೆ ಕಡಿಮೆಯಾಗಿದ್ದಾರೆ ಅಂತ ಅನಿಸುತ್ತೆ. ಅವರಲ್ಲಿ ಹಲವರು ಈಗ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ವಹಿವಾಟು ನಡಿಸುತ್ತಿದ್ದಾರೆಂದು ನನ್ನ ನಂಬಿಕೆ. ಹಳೆಯ ಬಟ್ಟೆಗಳು - ರೇಶಿಮೆ, ಕಾಟನ್, ಅದರಲ್ಲಿನ ಸತ್ವಕ್ಕೆ ಬೆಲೆಕಟ್ಟಿ ಅದಕ್ಕೊಂದು ಸ್ಟೀಲ್ ಪಾತ್ರೆಯನ್ನು ಕೊಂಡುಕೊಂಡುಕೊಳ್ಳುವುದು ಸಾಧಾರಣವಾಗಿ ನನ್ನ ತಾಯಿಯ ವಯೋಮಾನದವರ ಒಂದು Hobby. ವ್ಯಾಪಾರ ಮಾಡುವುದು, ಚೌಕಾಸಿ ಮಾಡುವುದು ಹೆಂಗಸರಿಗೆ ಕಷ್ಟವಿಲ್ಲದೇ ಲಭಿಸಿರುವ ವಿದ್ಯೆ. ಅವನು Exchange ನಲ್ಲಿ ಕೊಟ್ಟ ದಬ್ಬಿಗೋ, ಡಬರಿಗೋ, ತಾಟಿಗೋ, ಒಂದು ಚಮಚವನ್ನೋ, ಲೋಟವನ್ನೋ ಕಾಂಪ್ಲಿಮೆಂಟ್ ಕೇಳಿ ವ್ಯವಹಾರ ಮುಗಿಸುತ್ತಾರೆ ಹೆಂಗಸರು. ಇನ್ನು ಪೇಪರ್ (ನ್ಯೂಸ್ ಪೇಪರ್), ಶಾಲಾ ಪುಸ್ತಕಗಳು ತೂಕದ ಲೆಕ್ಕದಲ್ಲಿ ಮಾರುವುದು ಅದೊಂದು ಪದ್ಧತಿ. ಈ ವಿಷಯವಾಗಿ ಹೇಳುತ್ತಾ ನನ್ನ ಸ್ನೇಹಿತ "ಪರೀಕ್ಷೆ ಮುಗಿಸಿದ ದಿನವೇ ಈ ಪುಸ್ತಕಗಳನ್ನು ಮಾರಬೇಕೆನಿಸಿದರೂ ಅನಿವಾರ್ಯವಾಗಿ ಫಲಿತಾಂಶ ಬರುವವರೆಗೂ ಕಾಯಲೇ ಬೇಕು" ಎಂದು ಅಳಲು ತೋಡಿಕೊಳ್ಳುತ್ತಿದ್ದನು. ಇವುಗಳ ಸಾಲಿನಲ್ಲಿ ಬರುವ ಮತ್ತೊಂದಷ್ಟು ವಸ್ತುಗಳೆಂದರೆ ಹಳೆಯ ಕಬ್ಬಿಣ, ಪ್ಲಾಸ್ಟಿಕ್, ಹಾಲಿನ ಕವರ್, ಇತ್ಯಾದಿ. ಇವುಗಳನ್ನು ಮಾರಿದಾಗ ಬರುವ ಹಣ ಹೆಚ್ಚಲ್ಲದಿದ್ದರೂ ಅದಕ್ಕೊಂದು ಬೆಲೆ ಇದ್ದೇ ಇದೆ. ಮನೆ ಖಾಲಿಯಾಯಿತು. ಕಸ ಹೊರಗೆ ಹೋಯಿತು. ಕೈಗೊಂದಿಷ್ಟು ಪುಡಿಕಾಸು ದೊರಕಿ ಅದರಲ್ಲಿ ಮನೆಯವರಿಗೆಲ್ಲ ಒಂದು ದೋಸೆಯೋ, ಬೇಕರಿಯಿಂದ ಕೇಕೋ ಹೀಗೆ ತಂದು ತಿನ್ನುವಷ್ಟೇ ದೊರಕುವ ಈ ಚಿಲ್ಲರೆ ಕಾಸು ಎಷ್ಟೋ ಬಾರಿ ಖುಷಿ ಕೊಡುತ್ತದೆ.

ನನಗೋ ಮುಂಚಿನಿಂದಲೂ 'ಆಯುವ' ಖಯಾಲಿ. ಅಂದರೆ ಬೀದಿಯಲ್ಲಿ ಏನೋ ಕಂಡಿತೆಂದರೆ ಸಾಕು ಅದು ಸ್ವಲ್ಪ ವಿಚಿತ್ರವೆನಿಸಿದರೂ ಅದನ್ನು ಮನೆಯಲ್ಲಿ ತಂದು ಪೇರಿಸಿಕೊಳ್ಳುವುದು ನನ್ನ ಹಾಬಿಯೇ ಆಗಿತ್ತು. ತಂದೆ ತಾಯಿಯ ಸತತ ಜಬರಿಸುವಿಕೆ, ಬಯ್ಯುವುಕಿಎಯಿಂದ ಸ್ವಲ್ಪ ಸ್ವಲ್ಪ ವಾಗಿಯೇ ಕಡಿಮೆಯಾಗಿದೆ. ಪ್ರಾಯಶಃ ಮಗ ಓದದೇ ಇಂತಹ ಗುಜರಿ ಅಂಗಡಿಗೆ ಸೇರಿಬಿಡುತ್ತಾನೋ ಎನೋ ಎಂಬ ಭಯ ಅಪ್ಪ ಅಮ್ಮನಲ್ಲಿ ಇದ್ದಿರಬೇಕು. ಕಾರಣ ಅದು ಬೆಂಕಿಪೊಟ್ಟಣದ ಮೇಲಿನ ಚೀಟಿ ಸಂಗ್ರಹಣೆ ಇರಬಹುದು, (phillumeny) ಪಕ್ಷಿಗಳ ಪುಕ್ಕಗಳ ಶೇಖರಣೆ ಇರಬಹುದು, ಚಾಕಲೇಟ್ ಪೇಪರ್ ಸಂಗ್ರಹಣೆ, ಪೇಪರುಗಳಲ್ಲಿ ಅನಿಲ್ ಕುಂಬ್ಳೆ, ಡ್ರಾವಿಡ್, ಫೋಟೋ, ಹಾಗು ಅವರ ಬಗೆಗಿನ ಸಂದರ್ಶನ, ವಿಶೇಷ ಮಾಹಿತಿಯ ಪೇಪರ್ ಕಟಿಂಗ್ ಸಂಗ್ರಹಣೆ, ನ್ಯೂಸ್ ಪೇಪರುಗಳಲ್ಲಿ ಬಂದ ಕನ್ನಡ ಕವಿ-ಸಾಹಿತಿಗಳ ಭಾವಚಿತ್ರವನ್ನು ಪುಸ್ತಕದಲ್ಲಿ ಅಂಟಿಸಿಕೊಳ್ಳುವುದು ಹೀಗೆ ಹಲವಾರು. (ಈಗಿನ ದಿನಗಳಲ್ಲಿ ಪೇಪರ್ ಕಟಿಂಗ್ ಅಂತ ಯಾರೂ ಸಂಗ್ರಹಮಾಡಲಾರರು. e-paper ನಿಂದ ಆ ಲೇಖನವನ್ನೋ, ಭಾವಚಿತ್ರವನ್ನು ತಮ್ಮ ಗಣಕಯಂತ್ರದಲ್ಲಿ ಉಳಿಸಿಕೊಳ್ಳುತ್ತಾರೆ.) ಕೆಲವೊಮ್ಮೆ ಪೇಪರ್ ಅಂಗಡಿಗೆ ಹೋಗಿ ಹಳೆಯ ಪೇಪರನ್ನು ಮಾರಿ, ಅಲ್ಲಿಂದ ಯಾವುದಾದರೂ ಓದದ Readers Digest, CSR, Wisdom, ಪುಸ್ತಕಗಳನ್ನೂ ತರುತ್ತಿದ್ದೆ. ಕೆಲವೊಮ್ಮೆ ಹಳೆಯ ಕ್ಯಾಲೆಂಡರ್ ಎಂದು ಯಾರೋ ತೂಕಕ್ಕೆ ಹಾಕಿದ್ದನ್ನು ಅದರಲ್ಲಿನ ಚಿತ್ರಗಳಿಗೋಸ್ಕರ ಮನೆಗೆ ತಂದದ್ದೂ ಇದೆ. ಕೆಲತಿಂಗಳಿಂದ ಮನೆಯಲ್ಲಿ  Renovation ಕಾರ್ಯ ನಡೆಯುತ್ತಿದೆ. ಮನೆಯಲ್ಲಿ ಇದ್ದುಕೊಂಡು ಆ ರಂಪ ರಾಮಾಯಣದೊದಿಗೆ ಪ್ರತಿಯೊಂದು ಮುಖ್ಯಾತಿಮುಖ್ಯ ಸಾಮಾನು-ಸರಂಜಾಮುಗಳನ್ನು ಭದ್ರವಾಗಿ ಒಂದು ಜಾಗದಿಂದ ಮತ್ತೊಂದಕ್ಕೆ ವರ್ಗಾಯಿಸಿ ಅದಕ್ಕೊಂದು ಲುಕ್ ಅಪ್ ಟೇಬಲ್ ಅನ್ನೂ ಸಿದ್ಧಪಡಿಸ್ತುತ್ತಿದ್ದೆವು (ಮರು ವರ್ಗಾವಣೆಯ ಹೊತ್ತಿನಲ್ಲಿ ಈ ಲುಕ್ ಅಪ್ ಟೇಬಲ್ ಸಹಾಯಕ್ಕೆ ಬರುತ್ತದೆ) ಮೊಟ್ಟ ಮೊದಲ ಬಾರಿಗೆ ಓಕುಳಿ ಆಡಿ (SJCITಯ ಸ್ನೇಹಿತರೊಂದಿಗೆ) ಬಣ್ಣಮಯವಾಗಿದ್ದ ಶರ್ಟು, ನನ್ನ ಸ್ನೇಹಿತರು ತಮಗೆ ಬಂದ ಮೊದಲ ಸಂಬಳದಲ್ಲಿ ಕೊಡಿಸಿದ ಶರ್ಟುಗಳು (ಈ ಕೆಲವು ವರ್ಷಗಳಲ್ಲಿ ನನ್ನ ಸುತ್ತಳತೆಯೂ ಏರಿರುವುದರಿಂದ ಆ ಶರ್ಟುಗಳನ್ನು ಹಾಕುವುದು ಕಷ್ಟವಾದರೂ ನೆನಪಿಗೋಸ್ಕರ ಜೋಪಾನ ಮಾಡಿದ್ದೇನೆ), ಯಾವುದೋ ಟ್ರಿಪ್ ಗೆ ಹೋದಾಗ ಅಲ್ಲಿಯ ಊಟದ ಬಿಲ್ಲನ್ನು, ಬಿಲ್ಲಿನೊಂದಿಗೆ ನೆನಪಿಗೋಸ್ಕರ ಬಿಲ್ಲಿನ ಹಿಂಭಾಗದಲ್ಲಿ ಸ್ನೇಹಿತರ ಹಸ್ತಾಕ್ಷರಗಳು, ಏಳನೆಯ ಕ್ಲಾಸಿನಲ್ಲಿ ಉಪಯೋಗಿಸುತ್ತಿದ್ದ ಪೆನ್ನು - ಅದರಲ್ಲಿ ಶಾಹಿ ತುಂಬಿದರೆ ನಿಬ್ಬಿನಿಂದ ಬಿಟ್ಟು ಉಳಿದ ಮೈಯಲ್ಲೆಲ್ಲಾ ಶಾಹಿ ಉಕ್ಕಿ ಹೊರ ಹರಿದರೂ, ೨೦ ವರ್ಷದ ಹಿಂದೆ ಪಕ್ಕದ ಮನೆಯವರು ದೆಹಲಿಗೆ ಹೋಗಿ ಬಂದಾಗ ತಂದ ಸ್ವೆಟರ್ ಎಲ್ಲವೂ ಅಮೂಲ್ಯವೆನಿಸಲಾರಂಭಿಸಿತು. ಹರಗಣಗಳನ್ನು ಹೊರಹಾಕಲು ಪ್ರಯತ್ನಪಟ್ಟರೂ ಪ್ರತಿಯೊಂದನ್ನೂ ಇಟ್ಟುಕೊಳ್ಳಲೇಬೇಕೆಂದೆನಿಸುತ್ತಿತ್ತು.

ಭಾರತದಾದ್ಯಂತ ಹಳೆಯ ಪಾತ್ರೆ- ಪಗಡಿ, ಬಟ್ಟೆ-ಬರೆ ಯನ್ನು ಯಾರಿಗಾದರೂ ಕೊಟ್ಟು ತಕ್ಕ ಮಟ್ಟಿಗೆ ತಮ್ಮ ಮನೆಯನ್ನು ಕಸದಿಂದ ಶುದ್ಧ ಮಾಡಿಕೊಳ್ಳುವುದು ವಾಡಿಕೆಯೇ. ಹಾಗೆಯೇ ಆ ವಸ್ತುಗಳನ್ನು ತೆಗೆದುಕೊಂಡವನಿಗೂ nostalgia ಇರಲೂ ಬಹುದು. ಅವನು ಹಾಗೆ ಎಲ್ಲ ಮನೆಯಿಂದ ಬಂದ ಇಂತಹ ವಸ್ತುಗಳನ್ನು ತನ್ನ ಮನೆಯಿಂದ, ಅಂಗಡಿಯಿಂದ ಸಾಗಿಹಾಕುತ್ತಾ ಒಂದಷ್ಟನ್ನು ನೆನಪಿಗೋಸ್ಕರ ಹಿಡಿದಿಟ್ಟುಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಾರಣ ಅದು ಮನುಷ್ಯ ಸಹಜ ಗುಣ. ಯಾವವಸ್ತುವಾದರೂ ಈಗ ಪ್ರಯೋಜನಕ್ಕೆ ಬರದೆ ಇದ್ದರೂ ಮುಂದೆ ಯಾವಾಗಲಾದರೂ ಉಪಯೋಗಕ್ಕೆ ಬರಬಹುದೆಂಬ ಆಲೋಚನೆಯನ್ನಿಟ್ಟುಕೊಂಡೇ ಶೇಖರಿಸುತ್ತಿರುತ್ತಾನೆ, ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಆಗಾಗ್ಯೆ ನೋಡಿ ಆ ದಿನದ ಮಟ್ಟಿಗೆ ಯಾವುದಾದರೂ ಕೆಲಸಕ್ಕೆ ಬರಬಹುದೋ ಎನೋ ಎಂದು ನಂಬಿ ಒಳಗಿಟ್ಟಿದ್ದ ಆ ವಸ್ತುವನ್ನು  ಹೊರತೆಗೆದು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಕೆಲವೊಮ್ಮೆ ಬಟ್ಟೆ, ಪುಸ್ತಕ ಗಳನ್ನು ಮತ್ಯಾರಿಗೋ ದುಡ್ಡಿಗಾಗಿ ಕೊಡುವುದಕ್ಕಿಂತ ಮನೆಯಲ್ಲಿನ ತಮ್ಮ ಕೆಲಸದವರಿಗೋ ಅಥವಾ ಅನಾಥ ಮಕ್ಕಳಿಗೋ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾರೆ.

೨೦೦೮ ರಲ್ಲಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋದಾಗ ನಮ್ಮ ಪ್ರಬಂಧಕರು ನಮ್ಮೊಂದಿಗೆ ಮಾತನಾಡುತ್ತಾ "ನಿಮಗೆ ಯಾವುದಾದರೂ ಹೊಸ ವಸ್ತುವಿನ ಬೆಲೆ ಹೆಚ್ಚೆನಿಸಿದಲ್ಲಿ ಸೆಕಂಡ್ ಹ್ಯಾಂಡ್ ಐಟಮ್ ಕೊಳ್ಳಬೇಕಾದರೆ ಗ್ಯಾರೇಜ್ ಸೇಲ್ Garage sale ಅಥವಾ ಯಾರ್ಡ್ ಸೇಲ್ yard sale ಅಂತಾರೆ ಅಲ್ಲಿಗೆ ಹೋಗಿ ಕೊಂಡುಕೊಳ್ಳಬಹುದು" ಎಂದು ತಿಳಿಸಿದ್ದರು. ಅಮೇರಿಕನ್ನರು ಸ್ವಲ್ಪ ಜಾಸ್ತಿಯೇ calculative. ತಾವು ಬಳಸಿದ ಅಂಗಿ, ಪ್ಯಂಟ್, ಟೈ ನಿಂದ ಹಿಡಿದು, ಮನೆಯಲ್ಲಿ ಷೋ ಗೋಸ್ಕರವಾಗಿ ಇಡಬಹುದಾದಂತಹ ವರ್ಣಚಿತ್ರಗಳು, ಮಕ್ಕಳ ಆಟದ ಗೊಂಬೆಗಳು, ತಮ್ಮ ಮನೆಗೆ ಹೊಸ ಟೇಬಲ್, ಚೇರ್ ಗಳ ಅವಶ್ಯಕತೆ ಇತ್ತೆಂದರೆ ಹಳೆಯದ್ದನ್ನು ಗ್ಯಾರೇಜ್ ಸೇಲ್ ಗೆ ದಾಟಿಸುತ್ತಾರೆ. ಮೂರನೆಯ ವ್ಯಕ್ತಿಯನ್ನು ನಂಬದೇ ತಮಗೇ ಬೇಡವಾದ್ದನ್ನು ತಮಗೆ ಬೇಕಾದ್ದ ಲಾಭವನ್ನು ಎಣಿಸಿ  ಇಂತಹ ಸೇಲನ್ನು ತಮ್ಮ ಮನೆಯಲ್ಲೇ ನಡೆಸುತ್ತಾರೆ. ಮನೆಯಲ್ಲಿದ್ದ ವಸ್ತುಗಳು ಯಾರೂ ಒಯ್ಯದೇ ಇದ್ದಾಗ ಕೆಲವರು ಜಾಹೀರಾತಿನ ಮೊರೆಹೋಗುತ್ತಾರೆ. ನಾನು ನೋಡಿದ ಇಂತಹ ಸೇಲುಗಳಲ್ಲಿ ಅತಿ ಕಡಿಮೆದರದಲ್ಲಿ ಪುಸ್ತಕಗಳು, ಪಿಯಾನೋ, ಗಿಟಾರ್, ಲಾಪ್ ಟಾಪ್, TV,  ಹೀಗೆ ಸ್ಮೃತಿಗೆ ಬಂದ ಯಾವುದೇ ವಸ್ತುವನ್ನೂ ನೋಡಬಹುದಾಗಿತ್ತು. ಕೆಲವರು( ನಾನೂ ಸಹ) ಯಾರೋ ಬಳಸಿದ ಬಟ್ಟೆಯನ್ನೇಕೆ ಮಾರಬೇಕು ಎಂದು ಯಾವಾಗಲೂ ಪ್ರತಿಪಾದಿಸುತ್ತಿದ್ದರು. ಅದಕ್ಕೆ ನನ್ನ ಬಳಿಯೇ ಉತ್ತರವೂ ಇತ್ತು. ಅಲ್ಲಿಯಾರೂ ಸ್ಟೀಲ್ ಪಾತ್ರೆ ಸಾಮಾನ್ ಎಂದು ಸೈಕಲ್ ನಲ್ಲಾಗಲಿ, ಕಾರ್ ನಲ್ಲಾಗಲಿ ಕೂಗಿಕೊಂಡು ಹಳೆಯ ಬಟ್ಟೆಗಳಿಗೆ ಹೊಸ ಪಾತ್ರೆ Exchange ಮಾಡುವ ಅಭ್ಯಾಸ ಇರಲ್ಲ ನೋಡಿ. ಆದ್ದರಿಂದ ಆ ಬಟ್ಟೆಗಳನ್ನು ವಿಲೇವಾರಿ ಮಾಡುವ ಏಕೈಕ ಸಾಧನವೇ ಯಾರ್ಡ್ ಸೇಲ್. ಒಂದು ದಿನ ನಮ್ಮಲ್ಲಿಗೆ ಒಂದು ಕಾಟ್ ಬೇಕಾದ್ದರಿಂದ ಹೀಗೆ ಜಾಹೀರಾತನ್ನು ಹುಡುಕುತ್ತ ಈವಿ ಮನೆಗೆ ಫೋನಾಯಿಸಿದೆವು. ಅವಳು ತನ್ನ ಮನೆಯಲ್ಲಿ ಕಾಟ್ ಹಾಗು ಬೆಡ್ ಇದೆ, ಎರಡೂ ೧೫ ದಿವಸದ ಹಿಂದೆಯಷ್ಟೇ ಖರೀದಿ ಮಾಡಿದಿವಿ ಎನ್ನುತ್ತಾ ತನ್ನ ಮನೆಗೆ ಅರ್ಥಾತ್ ತನ್ನ ಮನೆಯ ಯಾರ್ಡ್ ಸೇಲ್ ಗೆ ಆಹ್ವಾನವಿತ್ತಳು. ಅಲ್ಲಿಗೆ ಹೋಗಿ ಅವಳೊಂದಿಗೆ ಮಾತನಾಡಿ ಎಷ್ಟು ಕೊಡುವುದನ್ನು ಚರ್ಚಿಸಿದ ಬಳಿಕ ಮಾತಿಗೆ ಕೇಳಿದೆ "೧೫ ದಿವಸದ ಈ ಹೊಸ ಮಾಲನ್ನು ಯಾಕೆ ಮಾರುತ್ತಿದ್ದೀರೆಂದು" ಅದಕ್ಕೆ ಈವಿ "ನಮ್ಮ ಮಾವ ಬಳಸುತ್ತಿದ್ದ ಕಾಟ್ ಇದು. ಅವರು ಮೊನ್ನೆಯಷ್ಟೇ ತೀರಿಹೋದರು..... " ಎಂದು ಕಣ್ಣಿರಿಡುತ್ತಿದ್ದಾಗ ನಾವು ಸೂತಕದ ಮನೆಗೆ ಬಂದಿದ್ದೇವೆಂದು ತಿಳಿದು ಅಲ್ಲಿಂದ ತಪ್ಪಿಸಿಕೊಳ್ಳುವ ಉಪಾಯ ಮಾಡಲು ಮುಂದಾದೆವು.........






(ಸಶೇಷ) 


::ವಿ.ಸೂ:: ಈ ಲೇಖನ ಬರೆಯಲು ಮೂಲ ಸ್ಪೂರ್ತಿ ಮನೆಯ ವಸ್ತುಗಳ ವರ್ಗಾವಣೆಯೇ ಆದರೂ, ಅದಕ್ಕೊಂದು ಆಯಾಮ ಕೊಟ್ಟಿದ್ದು ಜೂನ್ ಎರಡರಂದು  ’ಕನ್ನಡ ಪ್ರಭ’ ಪತ್ರಿಕೆಯಲ್ಲಿ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ರವರ ಪ್ರಕಟವಾದ ಲೇಖನ. ಅದನ್ನು ಇಲ್ಲಿ ಓದಬಹುದು.
http://www.kannadaprabha.com/News.asp?Topic=-125&Title=%AB%DA%E0%C1%E6Ml%DF+%AB%E6%E0%DEl&ID=KPO20110601225740&nDate=




ಇಂತಿ ನಿಮ್ಮವ,

ಪ್ರ ಕೊ ಪ




Monday, August 22, 2011

ಪ್ರಣಯದ ದಿನಗಳು


ರಾಜಗೋಪಾಲ ಅಂಕಲ್ (ಹೆಸರು ಬದಲಿಸಿದ್ದೇನೆ)  ನಮ್ಮ Family Friend. ನನ್ನ ತಂದೆಗಿಂತ ಸುಮಾರು ೨೨ ವರ್ಷಕ್ಕೆ ಹಿರಿಯರು. ಅವರಿಗೀಗ ೭೦ ವರ್ಷ ವಯಸ್ಸು. ಆಗಾಗ್ಗೆ ಮನೆಗೆ ಬರುತ್ತಿರುತ್ತಾರೆ. ಒಳ್ಳೆಯ ಸ್ನೇಹ ಜೀವಿಯಾದ್ದರಿಂದ, ಮಾತು ಕತೆ ಬೇಕಾದ್ದರಿಂದ ಬಂದಾಗಲೆಲ್ಲಾ ಹೆಚ್ಚು ಸಮಯ ನಮ್ಮೊಂದಿಗೆ ಕಳೆಯುತ್ತಾರೆ. ಕಳೆದ ಭಾನುವಾರ ಮನೆಗೆ ಬಂದಾಗ ನಾನು ಮನೆಯಲ್ಲೇ ಇದ್ದೆ. (!)Engagement  ಆದ ನಂತರ ಅರ್ಚೂಳನ್ನು ಭೇಟಿಯಾಗದೇ, ಅವಳ ಜೊತೆ ಮೊಬೈಲ್ ಹರಟೆ ನಡೆಸದೇ, ಎಸ್.ಎಂ.ಎಸ್ ನಲ್ಲಿ ಸಲ್ಲಪ ನಡೆಸದೇ ಇದ್ದ ಒಂದೇ ಒಂದು ದಿನ ಅದು. ಕಾರಣ ಅದು ಸ್ನೇಹಿತರ ದಿನಾಚರಣೆ. ಹೌದು, ಮದುವೆ ನಿಸ್ಚಯವಾದ ಮಧುಮಕ್ಕಳು ಸ್ನೇಹಿತರಾಗಿಯೇ ಉಳಿಯಬೇಕಾದರೂ ಅರ್ಚೂಳ ಹಳೆಯ ಸ್ನೇಹಿತರ ಮಿಲನ್ ಅದೇ ದಿನಕ್ಕೆ ನಿಗಧಿಯಾಗಿತ್ತು. ಹಾಗಾಗಿ ನಮ್ಮಿಬ್ಬರ ಭೇಟಿಗೆ ಒಂದು ಅಡ್ಡಗಾಲು ಇದ್ದೇ ಇತ್ತು. ಅದೇ ಕಾರಣದಿಂದಲೇ ಮೊಬೈಲ್ ನಲ್ಲಿ ಕರೆಯ ಸರಸವೂ ಮಿತಿಗೊಂಡಿತ್ತು. ಸ್ನೇಹಿತರ ದಿನಾಚರಣೆಯ ಅಂಗವಾಗಿ  Mobile service provider ಗಳೆಂಬ ಯಾಚಕಮಹಾಶಯರು ಸ್ನೇಹಿತರ ಭಾವನೆಗಳಿಗೆ ಬೆಲೆಕೊಡದೇ ಪ್ರತಿ SMS ಗೂ ಒಂದು ರುಪಾಯಿ charge ಮಾಡುತ್ತಿದ್ದರಿಂದ ಆ SMS ಭಾಗ್ಯವೂ ಕುಂಠಿತವಾಗಿತ್ತು. ಯಡ್ಯೂರಪ್ಪ, ಬಿ.ಜೆ.ಪಿ ಅಂತೆಲ್ಲಾ ಮಾತುಕತೆ ಮುಗಿದ ನಂತರ, ಅಚಾನಕ್ಕಾಗಿ ರಾಜಗೋಪಾಲ ಅಂಕಲ್, "ಏನಯ್ಯಾ ಹೇಗೆ ನಡಿತಾ ಇದೆ post engagement days " ಎಂದು ಕೇಳಿಬಿಟ್ಟರು, ಈ ಪ್ರಶ್ನೆಯನ್ನು ಹಿರಿಯರಾದ ಅವರ ಬಾಯಲ್ಲಿ ಬಂದಾಗ ಖುಶಿ ಹಾಗು ಆಶ್ಚರ್ಯ ಭರಿತ ನನ್ನ ಕಂಠದಲ್ಲಿ "ಹಾಂ ಅಂಕಲ್, ನಡಿತಾ ಇದೆ..... ಆದರೂ ನೀವು ಈ ಪ್ರಶ್ನೆ ಕೇಳಿದ್ರಿ. I am so happy" ಎಂದೆ. ನಾವಾಗಿ ನಾವು ಕೆಲವರನ್ನು Brand ಮಾಡಿರುತ್ತೀವಿ. ಇವರು ಸಂಪ್ರದಾಯಬದ್ಧರು. ಇವರೊಂದಿಗೆ ಮಾತನಾಡುವಾಗ ಹುಷಾರಾಗಿರಬೇಕು, ಅಥವಾ ಇಂತಹ ವಿಷಯವನ್ನು ಇವರೊಂದಿಗೆ ಮಾತನಾಡಿದರೆ ಇವರಿಗೂ ಇರಸು ಮುರಿಸಾಗಬಹುದೆಂದು. ಎಪ್ಪತ್ತರ ಹರೆಯದ ಅಂಕಲ್ ನನಗೆ ಪ್ರಶ್ನೆ ಕೇಳಿದಾಗ ನಾನು ಚಕಿತನಾದದ್ದು ಸಹಜ ಎಂದು ಈಗಲೂ ಭಾವಿಸುತ್ತೇನೆ. ತದನಂತರ ಅಂಕಲ್ ಮತ್ತೊಂದು ಪ್ರಶ್ನೆ ಕೇಳಿದರು. ದಿನಕ್ಕೆ ಎಷ್ಟು ಹೊತ್ತು ಮಾತಾಡ್ತಿರಿ? ಎಷ್ಟು ಸಲ ಮುಖಾಮುಖಿಯಾಗಿ ಸಿಗ್ತೀರಿ ಎಂದು. ಸಲ್ಲಾಪ-ಹರಟೆ ಅಷ್ಟೇ ಮುಖ್ಯವಲ್ಲ. ನಿನ್ನನ್ನು ಅವಳು, ಅವಳನ್ನು ನೀನು ಚೆನ್ನಾಗಿ ಅತಿಕೊಳ್ಳಬೇಕಾದ golden phase ಇದು ಎಂದರು ಅಂಕಲ್...................Post engagement to pre marriage ಸಮಯ ಬಹಳ ಅಮೂಲ್ಯವಾದದ್ದು. ಈ ದಿನಗಳಲ್ಲಿ ನಡೆದ ಪ್ರತಿಯೊಂದು ಘಟನೆಯೂ ನಿನ್ನ ಸ್ಮೃತಿಯಲ್ಲಿ ಉಳಿಯುತ್ತದೆ. ಬಹಳ ಎಂಜಾಯ್ ಮಾಡುವ ಈ ಸಮಯವನ್ನು ಸರಿಯಾಗಿ ಉಪಯೋಗಿಸಿಕೋ ಎಂದು ನನಗೆ ಹೇಳಿದವರು ಬಹಳಷ್ಟು ಸ್ನೇಹಿತರು. ರಾಜೇಶ್ವರಿ, ರಶ್ಮಿ, ಆಗಷ್ಟೇ ಜೀವನವೆಂಬ ನದಿಯಲ್ಲಿ Engagement ಎಂಬ ದೋಣಿ ಏರಿದ್ದ ಶ್ರೀನಿವಾಸ್, ಅರ್ಚೂಳ ಅಕ್ಕ - ಅಪರ್ಣಾ ಎಲ್ಲರೂ ಈ ವಿಷಯವಾಗಿ ಬೋಧಿಸಿದ್ದರು. ಇವರೆಲ್ಲಾ ನನ್ನ ವಾರ್ಗೀಯರು ಅಥವಾ ನನಗಿಂತ ವರ್ಷಕ್ಕೋ ಎರಡು ವರ್ಷಕ್ಕೋ ಹಿರಿಯರು. ಆದರೆ ಇದೇ ಮಾತುಗಳನ್ನು ಅಂಕಲ್ ಹೇಳಿದರು.  ಇವರು ನನ್ನ ಇತರೆ ಸ್ನೇಹಿತರಷ್ಟೇ, ನಮ್ಮ ವಯೋಮಾನದವರಷ್ಟೇ ಮುಂದಿದ್ದರು. ನನ್ನ ಭೇಟಿಯ ಕಂಪನಾಂಕ, ಮಾತನಾಡುವ ಕಾಲಾವಧಿಯನ್ನು ಹೇಳುತ್ತಾ ಮುಂದಿನ ನನ್ನ ಪ್ರಶ್ನೆಗಳನ್ನು ಕೇಳಿದೆ - ಅಂಕಲ್ ನಿಮ್ಮ ಕಾಲದಲ್ಲಿ ಹೇಗಿತ್ತು? ಆಗ ಫೋನ್ ಇಲ್ಲದ ಕಾಲದಲ್ಲಿ ಹೇಗೆ ಭೇಟಿ ಆಗುತಿದ್ರಿ? ಹೇಗೆ ಅಲೈನ್ ಆಗುತಿದ್ರಿ? ಅಂಕಲ್ ಹೇಳಿದರು - " ಯಾರದ್ದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆಯಂದರೆ ನಾನು ಕಾಗದ ಬರೆದು ತಿಳಿಸುತ್ತಿದ್ದೆ . ನೋಡು ಇಂಥವರ ಮನೆಯಲ್ಲಿ ಪೂಜೆ ಇದೆ. ನನಗೇನು ಖಚಿತವಾಗಿ ಕರೆದಿಲ್ಲವಾದರೂ ನಿನಗೆ ಆ ಮನೆಯವರು ಹೆಚ್ಚು ಗುರುತಿನವರಾದ್ದರಿಂದ ನೀನಂತೂ ಅಲ್ಲಿ ಬಾ. ನಾನು ಬರುತ್ತೇನೆ. ಸಿಕ್ಕೋಣ" ಎಂದು. ಅಲ್ಲಿಗೆ ಬಂದ ತೇಜಸ್ವಿನಿ ಆಂಟಿಯನ್ನು ಮಾತನಾಡಿಸುವ ಧೈರ್ಯ ಇವರಿಗಿರಲಿಲ್ಲ. ಏಕೆಂದರೆ ಅಲ್ಲಿರುವ ಹಿರಿಯರು ಇವರ ಮನೆಯವರಿಗೆ ತಿಳಿಸಿಬಿಟ್ಟರೆ ಗತಿಯೇನು ಎಂಬ ಭಯದಲ್ಲಿ. ಮಾವನವರ ಪೂರ್ವ ಸಿದ್ಧ ಅಪ್ರೂವಲ್ ಇದ್ದರೆ ಮಾತನಾಡುವ/ಭೇಟಿಯಾಗುವ ಅವಕಾಶ ಆ ಕಾಲದಲ್ಲಿತ್ತು. ಸಂಪ್ರದಾಯ ಬದ್ಧ ಕುಟುಂಬದಲ್ಲಿ ಸುಖಾಸುಮ್ಮನೆ ಮನೆಯ ಹೆಣ್ಣು ಮಕ್ಕಳನ್ನು ಹೊರಗೆ ಕಳಿಸುವುದು ನಿಶೇಧಿಸಿದ್ದರು. ಆಗೆಲ್ಲಾ ಪ್ರಾಯಶಃ ಅಳಿಯನಾಗುವವನು ಕಷ್ಟಪಟ್ಟು ಮಾವನನ್ನು ಒಪ್ಪಿಸಬೇಕಿತ್ತು ಅನಿಸುತ್ತೆ. ಪತ್ರ ಬರೆಯುವುದಾದರೆ,..... ಅಳಿಯ ಮಾವನವರಿಗೆ ಪತ್ರ ಬರೆದು ತದನಂತರ ಅದೇ ಪತ್ರದಲ್ಲಿ ಮಡದಿಗೊಂದು ಬರೆಯುತ್ತಿದ್ದರೋ ಏನೋ. ಮಾವನವರು ಓದಿ Censor screening ಆದ ಬಳಿಕ ಪತ್ರವನ್ನು ಮಗಳಿಗೆ ಓದಲು ಕೊಡುತ್ತಿದ್ದರೋ ಎಂಬ ಕಲ್ಪನೆ ಹುಟ್ಟುತ್ತದೆ. ಈಗಿನ ನನ್ನ ಕತೆನೋಡಿ ಇದುವರೆಗೂ ನಾನು ಮಾವನ ಮನೆಗೆ ಹೋದರೂ ಒಮ್ಮೆಯೂ ಮಾವನವರನ್ನು, ಅತ್ತೆಯವರನ್ನು ..... ಅರ್ಚನಾಳನ್ನು ಕರ್ಕೊಂಡು ಹೋಗಬೇಕೆಂದಿದ್ದೇನೆ. ನಿಮ್ಮ ಅನುಮತಿ ಬೇಕಿತ್ತು. ಅಂತ ಕೇಳಿಯೇ ಇಲ್ಲ. ನಾನು, ಅರ್ಚನಾ ಹಿಂದಿನ ದಿನ ಮಾತಾಡಿಕೊಂಡು ಅವಳು ನನ್ನ ಅತ್ತೆ ಮಾವರ ಅನುಮತಿ, ನಾನು ಅವಳ ಅತ್ತೆ ಮಾವರ ಅನುಮತಿ ಪಡಿತೇವೆಯೇ ಹೊರತು ಒಮ್ಮೆಯೂ ನಾನು ಅವರನ್ನು ಕೇಳಿಲ್ಲವಲ್ಲ ಎಂಬ Guilt ಈಗ ಕಾಡುತ್ತಿದೆ. ಈ ಲೇಖನ ಬರೆದ ಮೇಲೆ ಹೊಸದಾಗಿ ಈ ಅನುಮತಿಯ ಆಟ-ನಾಟಕ ವಾಡಿದರೆ ಅದು ಅಸಮಂಜಸವಾಗಬಹುದು. ನನ್ನguilt ಗಿಲೀಟಗಬಹುದು............

ಅಂಕಲ್ ಮಾತನಾಡುತ್ತಾ, "ಪಟವರ್ಧನ್, ನಿಮ್ಮ ದಿನಗಳು ಹೇಗಿತ್ರೀ?" ಎಂದು ಕೇಳಿದಾಗ ಅಪ್ಪ ಅಮ್ಮ ಇಬ್ಬರೂ ಸ್ವಲ್ಪ ನಾಚಿಕೆಯಿಂದಲೇ ಉತ್ತರಿಸಿದರು. "ನಾವು (ನನ್ನ ಅಪ್ಪ -ಅಮ್ಮ) ಮುಂಚಿಂದಲೂ ಅಂದರೆ ನಮ್ಮ ಮದುವೆಯ ಸಂಬಂಧ ಬೆಳೆಯುವ ಮುಂಚಿನಿಂದಲೂ ಪರಿಚಿತರೇ. ಭೇಟಿಯಾಗಬೇಕೆಂದರೆ ಪೂರ್ವ ಅನುಮತಿ ಬೇಡಬೇಕಾದ ಪ್ರಮೇಯ ಬರುತ್ತಲಿರಲಿಲ್ಲ. ಆದರೆ ನಾವು ಯಾವತ್ತು ಇಬ್ಬರೇ ಅಂತ ಎಲ್ಲಿಗೂ ಹೋಗಿಲ್ಲ. ನಮ್ಮ ಜೊತೆ ನಮ್ಮ ಇತರೆ ಕಸಿನ್ಸ್ ರನ್ನೂ ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದೆವು. ಯಾವತ್ತೂ ನಾವಿಬ್ಬರೇ ಮೂವೀಗೆ ಹೋಗಿರುವುದು ನೆನಪಿನಲ್ಲಿ ಇಲ್ಲ.".......ಹಾಗಂತ ನಾನು ವಿಶ್ವಾಸ್, ವೈಶಾಲಿ, ಅಶ್ವಿನಿ, ಮೀನಲ್ ರನ್ನು ಕರೆದುಕೊಂಡು ಅರ್ಚು ಜೊತೆಗೆ ಹೋಗಲಾಗುತ್ತ??????

ಇಷ್ಟೆಲ್ಲಾ ಹೇಳಲು ಕಾರಣ ನೆನ್ನೆ ರಶ್ಮಿ-ರಾಜೇಶರ ಮಗನ ನಾಮಕರಣಕ್ಕೆ ಹೋದಾಗ ಜೊತೆಯಲ್ಲಿ ಅರ್ಚನಾಳನ್ನು ಕರೆದುಕೊಂಡು ಹೋಗಿದ್ದೆ. ರಶ್ಮಿ ಹಾಗು ರಾಜೇಶರಿಂದ ಅವಳಿಗೆ ಕರೆಯೋಲೆಯೂ ಬಂದಿತ್ತು. ಆದರೂ ಮದುವೆಯ ಮುಂಚೆ ಕರೆದುಕೊಂಡು ಹೋದರೆ ಏನಾಗುತ್ತೆ ಯಾರೇನು ಭಾವಿಸುತ್ತಾರೆ, ಎಲ್ಲರ ದೃಷ್ಟಿಯಲ್ಲಿ ನಾನು ಕೆಳಗಾಗುತ್ತೇನಾ ಎಂದು ಯೋಚಿಸದೇ ಅಪ್ಪ ಅಮ್ಮ ನನ್ನು ಪರಿಹಾರ ಕೇಳಿ ಅರ್ಚುಳನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಆದರೂ ಆ ಕಾಲಕ್ಕೂ ಈ ಕಾಲಕ್ಕೂ ಎಂತಹ ವ್ಯತ್ಯಾಸ. ಇದು ಮುಂದುವರೆದಿದ್ದೇವೆಂದು ಬೀಗುವಂತಹ ಬೆಳವಣಿಗೆಯೋ ಅಥವಾ ನಮ್ಮ ಸ್ವಾರ್ಥತೆಯನ್ನು ಬಳಸಿಕೊಳ್ಳುವ ಪರಿಯೋ ತಿಳಿದಿಲ್ಲ. ತಿಳಿಯುವುದೂ ಇಲ್ಲ.

ಇಂತಿ ನಿಮ್ಮ,

ಪ್ರಕೊಪ

Monday, August 15, 2011

ರಕ್ಷಾ ಬಂಧನ



ಹೆಣ್ಣು ಮಕ್ಕಳಿಗೆ ಪ್ರತಿ ಹಬ್ಬವೂ ಸಂಭ್ರಮವೇ!! ಉಗಾದಿಯಿಂದ ಹೋಳಿ ಹುಣ್ಣಿಮೆಯವರೆಗೂ ದಿನವೂ ಒಂದಿಲ್ಲೊಂದು ಹಬ್ಬ ಇದ್ದೇ ಇರುತ್ತದಲ್ಲ. ಅವೆಲ್ಲಕ್ಕೂ ಅವರು ಅತ್ಯುತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅದು ಪೂಜೆಗೆ ಅಣಿಮಾಡುವುದಿರಬಹುದು, ಬರೆಯ ಬಾಹ್ಯ ಅಲಂಕಾರವಿರಬಹುದು, ಹಬ್ಬದ ದಿನ ತಯಾರು ಮಾಡುವ ಹೋಳಿಗೆ, ಚಕ್ಕುಲಿ, ಕೋಡುಬಳೆ, ಉಂಡೆ...... ತಯಾರಿಸುವಾಗ ಅಮ್ಮನಿಗೋ, ಅತ್ತೆಗೋ ಮಾಡುವ ಸಹಾಯ, ಕಡೆಗೆ ಎಲ್ಲವೂ ಮುಗಿದ ನಂತರ ಮುತ್ತೈದೆಯರಿಗೆ ಅರಿಷಿಣ-ಕುಂಕುಮ ಕೊಟ್ಟು ಆಶಿರ್ವಾದ ಪಡೆದು ಸಂತಸಗೊಳ್ಳುವುದು ಹೀಗೆ ನಾನಾ ತರಹದಲ್ಲಿ ಸಂತಸದಿಂದ ಓಡಾಡಿಕೊಂಡು ಇರುತ್ತಾರೆ ಹಿಂದು ಹೆಣ್ಣುಮಕ್ಕಳು. ಗಂಡು ಮಕ್ಕಳಿಗೋ ಈ ಹಬ್ಬಗಳ, ದೈನಿಕ ಪಂಚಂಗದ, ಮಾಹಿತಿಯೂ ಇರುವುದಿಲ್ಲ. ಹೆಚ್ಚೆಂದರೆ ಹೆಣ್ಣುಮಕ್ಕಳ ಶಾಪಿಂಗ್ ಹೆಸರಿನಲ್ಲಿ ಸೋದರನಾಗಿಯೋ, ಗಂಡನಾಗಿಯೋ, ಸುತನಾಗಿಯೋ ಸ್ವಲ್ಪ ಕಾರಿನಲ್ಲಿ ಓಡಾಟ, ಖರ್ಚು ಭರಿಸುವುದು ಎಂಬ ಮೇಲ್ವಿಚಾರಕ ಕಾರ್ಯಗಳನ್ನು ಮಾಡಿ ಮಧ್ಯಾಹ್ನದ ಹೊತ್ತಿಗೆ ಮಾಡಿದ ಅಡಿಗೆಯನ್ನು ಹೊಗಳಿ, ಗುಣಗಾನ ಮಾಡಿ, ಹೊಟ್ಟೆತುಂಬುವಷ್ಟು ತಿಂದು ಹಬ್ಬವನ್ನು ಆಚರಿಸುವುದು ಗಂಡಸರ ಪರಿ.

ಆದರೂ ಕೆಲವು ಹಬ್ಬಗಳು ಗಂಡಸರ ಹಬ್ಬವೆಂದೇ ಪರಿಗಣಿಸಲಾಗುತ್ತೆ. ಆ ಹಬ್ಬಗಳಲ್ಲಿ ಗಂಡಸರ ಪಾತ್ರವೇ ಹೆಚ್ಚು. ಉದಾಹರಣೆಗೆ ಬ್ರಾಹ್ಮಣ ಸಮುದಾಯದಲ್ಲಿ ನಡೆಯುವ ಅನಂತಪದ್ಮನಾಭ ವ್ರತ-ಅನಂತನ ಚತುರ್ದಶಿ, ಉಪಾಕರ್ಮ-ನೂಲು ಹುಣ್ಣಿಮೆ. ಮೊನ್ನೆ ಶನಿವಾರವಷ್ಟೇ ನೂಲು ಹುಣ್ಣಿಮೆಯಾದ್ದರಿಂದ ಈ ಲೇಖನವನ್ನು ನೂಲು ಹುಣ್ಣಿಮೆಗೇ ನಿರ್ದಿಷ್ಟಗೊಳಿಸುತ್ತೇನೆ. ಜನಿವಾರಧಾರಿಗಳು ವರ್ಷಕ್ಕೊಮ್ಮೆ ತಮ್ಮ ಜನಿವಾರವನ್ನು ಬದಲಿಸುವ ಪರಿಪಾಠವೇ ನೂಲು ಹುಣ್ಣಿಮೆ. ಅದಕ್ಕೆ ಮತ್ತೊಂದು ಹೆಸರೆಂದರೆ ಉಪಾಕರ್ಮ. ಬ್ರಹ್ಮೋಪದೇಶದ ನಂತರ ಪ್ರತಿವರ್ಷವೂ ಬ್ರಹ್ಮಚಾರಿಗಳು, ಗೃಹಸ್ಥರು ತಮ್ಮ ಜನಿವಾರವನ್ನು ಬದಲಿಸಬೇಕು. ಬ್ರಹ್ಮಚಾರಿಗಳಿಗೆ ಮೂರೆಳೆಯ ಜನಿವಾರ, ಗೃಹಸ್ಥರಿಗೆ ಆರೆಳೆಯ ಜನಿವಾರ. ನನಗೆ ಬ್ರಹ್ಮಚರ್ಯದ ಕೊನೆಯ ಉಪಾಕರ್ಮ ಇದಾಗಿತ್ತು. ಇದೇ ನೂಲು ಹುಣ್ಣಿಮೆಯನ್ನು ರಕ್ಷಾ ಬಂಧನವನ್ನಾಗಿಯೂ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದರ ಮಹತ್ವ ಈಚೆಗೆ ಸ್ವಲ್ಪ ವರ್ಷದಿಂದ ಹೆಚ್ಚಾದಂತಿದೆ. ಸೋದರ ಸಂಬಂಧವನ್ನು ಎತ್ತಿಹಿಡಿಯುವುದು ಈ ಹಬ್ಬದ ವೈಶಿಷ್ಟ್ಯ. ಎಲ್ಲಕಿಂತಲೂ ಮಿಗಿಲಾದ ಈ ಸಂಬಂಧವನ್ನು ಸೋದರಿಯರು  ಒಡಹುಟ್ಟಿದ ಅಣ್ಣಂದರಿಗೆ, ತಮ್ಮಂದರಿಗೆ ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎಲ್ಲೂ ಶಾಸ್ತ್ರವಿಲ್ಲದಿದ್ದರೂ ತಮ್ಮ ಪ್ರೀತಿ ವಿಶ್ವಾಸವನ್ನು ತನ್ಮೂಲಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಸೋದರಿಯರಿಗೆ ಸೋದರನು ಒಂದು ಪುಟ್ಟ ಕಾಣಿಕೆಯನ್ನು ಕೊಡುತ್ತಾನೆ. ಪ್ರತಿ ವರ್ಷವೂ ರಕ್ಷೆ ಕಟ್ಟುವುದಕ್ಕೆ, ಅಣ್ಣ ತಂಗಿ ಅಕ್ಕ-ತಮ್ಮನ ಸಂಬಂಧ Renewal ಅಂತಲೇನೂ ಇರುವುದಿಲ್ಲ. ಪ್ರಾಯಶಃ ಹೆಣ್ಣು ಮಕ್ಕಳು ಈ ಅವಕಾಶವನ್ನು ತಮ್ಮ ಸೋದರನ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿಕೊಳ್ಳಲು, ಅಥವಾ ಎನಾದರೂ ಸಿಗಬಹುದೆಂಬ ಒಳ ಹುನಾರದಿಂದಲೂ (ತಮಾಷೆಯಷ್ಟೇ)  ರಕ್ಷೆ /ರಾಖಿ ಕಟ್ಟುತ್ತಾರೆ. ಅಲೆಕ್ಸಾಂಡರ್ ಭಾರತದ ಮೇಲೆ ಧಾಳಿ ಮಾಡಲು ಬಂದಾಗ ಅವನ ಮಡದಿ ರಾಜ ಪುರೂರುವನಿಗೆ ಒಂದು ರಾಖಿಯನ್ನು ಕಳುಹಿಸಿ ತನ್ನ ಗಂಡನಿಗೆ ಪ್ರಾಣಾಪಾಯವಾಗದಂತೆ ನೋಡಿಕೊ ಎಂದು ಬೇಡಿಕೊಂಡಿದ್ದಳಂತೆ. ಪುರೂರವ ತನ್ನ ತಂಗಿಗೆ, ರಕ್ಷೆಗೆ ವಿಶೇಷ ಮರ್ಯಾದೆ ಕೊಟ್ಟಿದ್ದನೆಂದು ಇತಿಹಾಸ ಹೇಳುತ್ತದೆ.

ಪುರಾಣದಲ್ಲಿ ದ್ರೌಪದಿಯು ತನ್ನ ಸೀರೆಯ ನೂಲನ್ನು ಹರಿದು ಯುದ್ಧದಲ್ಲಿ ಗಾಯಗೊಂಡ ಶ್ರೀಕೃಷ್ಣ ಪರಮಾತ್ಮನ ಕೈಗೆ ಕಟ್ಟಿದ್ದಳಂತೆ. ಆಗ ಎನೂ ಉಡುಗೊರೆ ಕೊಡದಿದ್ದರೂ ದ್ರೌಪದಿಯ ವಸ್ತ್ರಾಪಹರಣವಾದಾಗ  ಹೆಣ್ಣಿನ ಅತಿದೊಡ್ಡ ಆಸ್ತಿಯಾದ ಅವಳ ಮಾನ ಕಾಪಾಡಿದವನು ಅವಳ ಅಣ್ಣನಾದ ಶ್ರೀಕೃಷ್ಣ ಪರಮಾತ್ಮನೇ. ಇಷ್ಟೆಲ್ಲಾ ಕತೆಯಿದ್ದರೂ ರಕ್ಷಾ ಬಂಧನಕ್ಕೆ ಹೆಚ್ಚು ಮೆರಗು ಬಂದಿರುವುದು ರಾಣಿ ಕರ್ಣಾವತಿ - ಹುಮಾಯುನ್ ರಕ್ಷಾ ಪ್ರಕರಣದಿಂದ. ಬಹಾದುರ್ ಷಾ ನಿಂದ  ತೊಂದರೆ ಅನುಭವಿಸುತ್ತಿದ್ದ ರಾಣಿ ಕರ್ಣಾವತಿ ಮೊಘಲ್ ದೊರೆ ಹುಮಾಯುನ್ ಗೆ ರಕ್ಷೆ ಕಳುಹಿಸಿ, ರಕ್ಷಣೆ ಯಾಚಿಸಿದಳಂತೆ. ಹುಮಾಯುನ್ ಬಹಾದುರ್ ಷಾ ನನ್ನು ಯುದ್ಧದಲ್ಲಿ ಮಣಿಸಿ ಕರ್ಣಾವತಿ ಕಳೆದುಕೊಂಡ ರಾಜ್ಯವನ್ನು ಅವಳ ಮಗನಿಗೆ ದೊರಕುವಂತೆ ಮಾಡಿದನಂತೆ. ಹಾಗೆಯೇ ಯಮರಾಜನ ತಂಗಿ ಯಮುನಾ ಅಮರಳಾಗಿ ಉಳಿಯಲು ಬಹುತೇಕ ಈ ರಕ್ಷೆಯೇ ಕಾರಣ. ಯಮರಾಜನೂ ಇದನ್ನೇ ಹೇಳಿದ್ದಾನೆ. ಭೂಲೋಕದಲ್ಲಿ ಯಾರು ತಮ್ಮ ತಂಗಿಗೆ ರಕ್ಷೆ ನೀಡುತ್ತಾರೋ ಅವರು ಅಮರರಾಗಿ ಉಳಿಯುತ್ತಾರೆಂದು, ಹಾಗಾದರೆ ಸೋದರೆ ಕಟ್ಟುವ ರಾಖಿ ನಿಮ್ಮ ಶ್ರೇಯಸ್ಸಿಗಾಗಿಯೂ ಹೌದು. ನಿಮ್ಮಿಂದ ಅವಳಿಗೆ ಸಿಗುವ ಶ್ರೀರಕ್ಷೆಗಾಗಿಯೂ ಹೌದು. RSS ಶಾಖೆಯಲ್ಲೂ  ರಕ್ಷಾ ಬಂಧನ ನಡೆಯುತ್ತದೆ. ಶಾಖೆಯಲ್ಲಿ ದೇಶ ರಕ್ಷಣೆ, ಭ್ರಾತೃತ್ವ, ಹಿಂದು ಧರ್ಮ ರಕ್ಷಣೆ ಮೂಲ ಮಂತ್ರವಾಗಿಸಿಕೊಂಡು, ಸ್ವಯಂಸೇವಕರಾದ ನಾವು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ, ಪರಸ್ಪರ ರಕ್ಷಣೆಗೆ ಪಣತೊಡುತ್ತೇವೆ.

ನಾವೆಲ್ಲರೂ (ಗಂಡು ಮಕ್ಕಳು) ಶ್ರೀಕೃಷ್ಣನಂತೆ ಒಬ್ಬ ದ್ರೌಪದಿಯನ್ನು ರಕ್ಷಿಸುವಂತಹ ಅಣ್ಣನಾಗಬೇಕು. ಭಾರತಮಾತೆಯ ಹೆಮ್ಮೆಯ ಪುತ್ರರಾಗಬೇಕು.
ನನ್ನ ತಂದೆ-ತಾಯಿಯರಿಗೆ ನಾನೊಬ್ಬನೇ  ಮಗನಾದ್ದರಿಂದ ನನಗೆ ಅಕ್ಕ-ತಂಗಿಯ ಭಾಗ್ಯವಿಲ್ಲ. ಆದರೆ ದೊಡ್ಡಪ್ಪನ ಮಗಳಾದ ಅಶ್ವಿನಿ ಈಚೆಗೆ ರಾಖಿ ಕಟ್ಟದಿದ್ದರೂ ಆಕೆ ನನ್ನ ಅಕ್ಕ; ಚಿಕ್ಕಪ್ಪನ ಮಕ್ಕಳಾದ ರಶ್ಮಿ, ರಕ್ಷಾ (ಹೆಸರಲ್ಲೇ ರಕ್ಷೆ ಇದೆ) ಯರಿಗೆ ನಾನು ಅಣ್ಣ............ ನನಿತಾ, ಸೌಮ್ಯಶ್ರೀ, ಶಿಲ್ಪಾ ಬಿ ಕೆ, ಶಾಂತಿ, ಸ್ನೇಹಿತರೆಂದು ಹೇಳಿಕೊಳ್ಳುವುದಕ್ಕಿಂತ ನನ್ನ ಅಕ್ಕ ತಂಗಿಯರು ಎಂದು ಹೇಳಿಕೊಳ್ಳುವುದರಲ್ಲಿ ಖುಷಿ ಇದೆ. ವೇದಾವತಿ, ಅರ್ಚನಾ ಹಂಚಾಟೇ (ದಯಮಾಡಿ ಸರಿಯಾಗಿ ಹೆಸರು ಓದಿ), ಲಕ್ಷ್ಮಿ ಕದ್ರೊಳ್ಳಿ, ನಂದಿನಿ ಗೋವಿಂದಪ್ಪ,  ಅಂಬಿಕಾ ವರ್ಣೆ, ನನಗೆ ಪ್ರತಿವರ್ಷವೂ ರಾಖಿ ಕಟ್ಟುವ, ಕಟ್ಟದಿದ್ದರೂ ಅವರೆಲ್ಲರೂ ನನ್ನ ಸೋದರಿಯರೆಂದು ನಂಬಿರುವವನು ನಾನು. ನನ್ನಿಂದ ಅವರಿಗೇನು ಒಳಿತಾಗಿದೆಯೋ ನಾನರಿರೆ ಆದರೆ ನನ್ನಿಂದ ಕೆಡುಕಾಗದಂತೆ ನನ್ನ ಪ್ರಯತ್ನ ನಾನು ಮಾಡುತ್ತಿದ್ದೇನೆ. ನನಗನಿಸುವಂತೆ, ಇದೊಂದು ದಿನ ಗಂಡಸಾಗಿ ನಿಮ್ಮ ಸುತ್ತಲೂ ಹೆಚ್ಚು ಹುಡುಗಿಯರಿದ್ದರೆ ನಿಮ್ಮನ್ನು ಯಾರ್ಯಾಯೂ ಕುಚೋದ್ಯ ಮಾಡುವ ಸಲುಗೆ ಮಾಡುವುದಿಲ್ಲ. ಕಾರಣ ಇದು ಅತಿ ಪವಿತ್ರವಾದ ಸೋದರ-ಸೋದರಿಯ ಸಂಬಂಧ. ................

ಈ ವರ್ಷ ರಾಖಿ ಕಟ್ಟಿದ ಸೌಮ್ಯಶ್ರೀ, ನನಿತಾ ಕಟ್ಟಲು ಕಾಯುತ್ತಿರುವ ವೇದಾವತಿ, ಕಟ್ಟದೆಯೇ  SMS ನಲ್ಲಿ ನನಗೆ ಶುಭ ಹಾರೈಸಿದ ರಾಧಿಕಾ, ಅರ್ಚನಾ ಹಂಚಾಟೆ, ಶಿಲ್ಪಾ ಬಿಕೆ ಗೆ ನನ್ನ ಅನಂತಾನಂತ ಧನ್ಯವಾದಗಳು.

ಇಂತಿ ನಿಮ್ಮವ,

ಪ್ರಕೊಪ




Sunday, July 31, 2011

ಹೆಸರಲ್ಲೇನಿದೆ ರೀ..............................

"ಹೊಸದೊಂದು ಹೆಸರಿಡು ನನಗೆ ನಿನಗಿಷ್ಟಾ ಆಗುವ ಹಾಗೆ. ಮುದ್ದಾಗಿ ಅದರಲ್ಲೆ ನನ್ನ ಕರೆಯೇ..............." ಎಂಬ ಹಾಡು ಹಾಡುವ ಸಮಯ ಹುಟ್ಟಿದ್ದು ಜೂನ್ ೨೬ ರಿಂದ ಪ್ರಣಯದ ದಿನಗಳು (courtship days) ಪ್ರಾರಂಭವಾದಾಗಿನಿಂದ. ನನಗಂತೂ ಅರ್ಚನಾ 'ಅರ್ಚು' ಆಗಿಬಿಟ್ಟಿದ್ದಳು. ಹಾಗೆಯೇ ನನಗೊಂದು ಹೆಸರು ಬೇಕಿತ್ತು. ಮುಂಚಿಂದಲೂ ನನಗೆ ಪೆಟ್ ನೇಮ್ ಅಂತ ಯಾರೂ ಹೆಸರಿಸಲೇ ಇಲ್ಲ. ಅರ್ಚನಾ ಇದನ್ನು ಕೇಳಿ ಸ್ವಲ್ಪ ಗಾಬರಿಯಾದ್ಲು. Usually ಎಲ್ಲರಿಗೂ ಪೆಟ್ ನೇಮ್ ಅಂತ ಇದ್ದೇ ಇರುತ್ತೆ ರೀ!!!! ಎಂದು ಅಭಿಪ್ರಾಯಪಟ್ಟಳು. ಊರಲ್ಲಿ ಅಜ್ಜನೋ, ಸತೀಶ್ ಕಾಕಾ ನೋ (ನೆನಪಿಲ್ಲ !!) ನನ್ನನ್ನು ಪ್ರವೀಣಪ್ಪ ಎಂದು ಕರೆಯುತ್ತಿದ್ದರು. ಆ ಹೆಸರೇ ಗಟ್ಟಿಯಾಯಿತು. ಅಜ್ಜ, ಕೆಲವೊಮ್ಮೆ ಅಪ್ಪ-ಅಮ್ಮ, ದೊಡ್ಡಮ್ಮ(ಅಜ್ಜಿ), ವೆಂಕಟೇಶ್ ದೊಡ್ಡಪ್ಪ, ಅತ್ತೆಯರು ನನ್ನ ಕಸಿನ್ಸ್ ಎಲ್ಲರೂ ಪ್ರವೀಣಪ್ಪ ಎಂದೇ ಕರೆಯುತ್ತಿದ್ದರು. ರಮೇಶ ರಮ್ಮಿ ಆಗ್ತಾನೆ, ವೆಂಕಟೇಶ ವೆಂಕಿ, ವೆಂಕು ಆಗ್ತಾನೆ ಆದರೆ ಪ್ರವೀಣ್ ಎಂಬ ನನ್ನ ಹೆಸರನ್ನು ಯಾರ್ಯಾರೂ ಮೊಟಕುಗೊಳಿಸಿ, ಪ್ರಾವ್, ಪ್ರಾವ್ಸ್ (ಶ್ರಾವಣಿ ಶ್ರಾವ್ಸ್ ಆಗ್ತಾಳೆ ಅಲ್ವೆ ಹಾಗೆ), ಪ್ರವೀ, ಪ್ರವು ಎಂದು ಕರೆದಿರಲಿಲ್ಲ.  ನನಗೂ ಈ ಹೆಸರಿನ ಕಲ್ಪನೆಗಳು / ಹೆಸರುಗಳು(!!) :-) ಬಂದಿದ್ದು  ಈಗ್ಗೆ ಸ್ವಲ್ಪ ದಿನಗಳ ಹಿಂದೆಯಷ್ಟೇ..... ನನ್ನ ಪೆಟ್ ನೇಮ್ ಅಲ್ಲದಿದ್ದರೂ ಪೆನ್ ನೇಮ್ ಅಂತ ಪ್ರವೀಣ್ ಕೊಳವಳ್ಳಿ ಅಚ್ಯುತ ಪಟವರ್ಧನ್ ಅನ್ನು ಪ್ರಕೊಪ (PrAKoPa) ಮಾಡಿಕೊಂಡಿದ್ದೆ.   ಕುವೆಂಪು, ಪು.ತಿ.ನ, ಪೂಚಂತೇ, ತಿ.ನಂ.ಶ್ರೀ, ಬಿ.ಎಂ.ಶ್ರೀ  ಗಳಂತೆ  ನಮ್ಮ ಕಟುಂಬ ಸ್ನೇಹಿತರಾದ - ಗಿರೀಶ್ ಕುಮಾರ್ ಕಲ್ಕುಂದ ಗಿಕುಕ ಎಂದು ಕರೆದುಕೊಳ್ಳುತ್ತಿದ್ದರು. ಪ್ರಾಯಶಃ ಇವರೆಲ್ಲರೂ ನಾನು ಪ್ರಕೊಪ ಆಗಲು ಸ್ಪೂರ್ತಿ. ಪ್ರಾಣೇಶ್ ಎಂಬ ಗಂಗಾವತಿಯ ಹಾಸ್ಯ ಭಾಷಣಕಾರರ ಒಂದು  ಎಂದೂ  ಮಿಸ್ ಆಗದ ಜೋಕ್ ಇದು ".....ಉತ್ತರ ಕರ್ನಾಟಕದ ಹೆಸರು ಮೊಟಕಿಸುವ ಶೈಲಿಯಲ್ಲಿ ಬಸವರಾಜ್ ಬಸ್ಯ ಆಗ್ತಾನಾ, ಶ್ರೀನಿವಾಸ ಸೀನ್ಯಾ ಆಗ್ತಾನಾ, ಲಲಿತಾ ಲಲ್ಲಿ ಅಕ್ಕಾಳ, ಸುಮಿತ್ರಾ ಸುಮಿ ಅಕ್ಕಾಳ, ಮಂದಾಕಿನಿ ಮಂದಿ ಆಗ್ಯಾಳ. ಯಾರ್ ಮನೀಗ್ ಹೋಗೀಲೇ ಅಂತ ಕೇಳಿದ್ರ ’ಮಂದಿ’ ಮನಿಗಾ ಅನ್ನೋ ಉತ್ರಾ ಬರಾತಿತ್ತು. ಇವು ಯಾರ ಮಕ್ಳೋಲ್ಲೇ ಅಂತ್ ಕೇಳಿದ್ರಾ ಮಂದಿ ಮಕ್ಕ್ಳು ಅಂತಿದ್ರು......"  ಕಾರ್ಮಿಕ್ ನಲ್ಲಿ ಇದ್ದ ಮತ್ತೊಬ್ಬ ಪ್ರವೀಣ್ ಗೆ ಉತ್ತರ ಕರ್ನಾಟಕ ಮಿತ್ರರು ಪವ್ಯಾ ಎಂದು ಮರು ನಾಮಕರಣ ಮಾಡಿದ್ದರು ಎಂಬುದಿಲ್ಲ ಸ್ಮರಿಸಿಕೊಳ್ಳುತ್ತೇನೆ.

ಪ್ರವೀಣ್ ಪಟವರ್ಧನ್ ಎಂಬ ನನ್ನ ಹೆಸರನ್ನು ಮೊಟಕುಗೊಳಿಸಿದ್ದು ಶಿಲ್ಪಾ ಪಲ್ಲೇದ್, ನಂದಿನಿ ಗೋವಿಂದಪ್ಪ, ಕಾವೇರಿ ಕಂಟಿಮಠ, ಎಂಬ  ನನ್ನ ಕಾರ್ಮಿಕ್ ನBatchmates. ಪಟವರ್ಧನ್ ಎಂಬ ನಮ್ಮ ಮನೆತನದ ಹೆಸರನ್ನು ಪಟ - ಅವರೇ, ಪಟ- ರೀ ಎಂದು Modify ಮಾಡುತ್ತಾ ಪಟ್ರಿ ಎಂದಾಗಿಸಿದ ಕಥೆಯನ್ನು ಸಾವಿರಾರು ಬಾರಿ ಹೇಳಿಕೊಂಡಿದ್ದೇನೆ. ಪಟ್ರಿ ಎಂಬುದೇ ನನ್ನ ಮೂಲ ಹೆಸರು ಎಂದು ಭಾವಿಸಿದ ಕೆಲವರು ನನ್ನನ್ನು ಪಟ್ರಿ ಸಾರ್ ಎಂದು ಸಂಬೋಧಿಸುತ್ತಿದ್ದರು. ಪ್ರವೀಣ್ ಕೆ.ಎ ಇಂದ ಪ್ರವೀಣ್ ಪಟವರ್ಧನ್ ಆಗಿ ಬದಲಾಗಬೇಕಾದರೆ ನೋಟರಿಯ ಮೊರೆ ಹೋಗಿದ್ದು ನೆನಪಾಗುತ್ತದೆ. ನಾನು ಹೆಸರು ಬದಲಿಸಿಕೊಂಡಂತೆ ತಮಗೆ ಸಿಕ್ಕ ಯಶಸ್ಸಿನ ಮೇರೆಗೆ, ಜ್ಯೋತಿಷಿಗಳ ನಿರ್ದೇಶನದಂತೆ (ಪಂಚಾಕ್ಷರಿ ಯಡಿಯೂರಪ್ಪ, ಚತುರಾಕ್ಷರಿ ಯಡ್ಯೂರಪ್ಪ ಆಗಿದ್ದು ಗೊತ್ತಲ್ಲ!!! ) ಮದುವೆಯ ನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳಲೋಸುಗ ಹಲವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. "ಮುಖ್ಯಮಂತ್ರಿ" ಎಂಬ  ಹುದ್ದೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದು ಚಂದ್ರು ನಾಟಕವೊಂದರಲ್ಲಿ "ಮುಖ್ಯಮಂತ್ರಿ" ಯ ಪಾತ್ರ ನಿರ್ವಹಿಸಿದ ನಂತರ. ಜನರು ಅವರನ್ನು "ಮುಖ್ಯಮಂತ್ರಿ"ಯಾಗಿಯೇ ಗುರುತಿಸಲು ಆರಂಭಿಸಿದಾಗ . ಶ್ರೀನಿವಾಸ್ 'ತೂಗುದೀಪ' ಶ್ರೀನಿವಾಸ್ ಆಗಿದ್ದು, ಸೀತಾರಾಮು 'ಉಪಾಸನಾ' ಸೀತಾರಾಮು ಆಗಿದ್ದು  ಎಲ್ಲರಿಗೂ ಗೊತ್ತು. ಆ ಹೆಸರುಗಳು ತಾವು ಅಭಿನಯಿಸಿದ ಚಲನಚಿತ್ರಗಳು ಎಂಬುದು ಹಲವರಿಗೆ ಗೊತ್ತಿಲ್ಲ. ತಮಾಷೆ ನೋಡಿ. ಶ್ರೀನಿವಾಸ್ ರ ಮಕ್ಕಳು ದರ್ಶನ್, ದಿನಕರ್ ತಮ್ಮ ಹೆಸರುಗಳಿಗೆ ಅಂತ್ಯದಲ್ಲಿ "ತೂಗುದೀಪ" ಎಂಬ ಹೆಸರು ಸೇರಿಸಿಕೊಂಡಿದ್ದಾರೆ. 'ತೂಗುದೀಪ' ಅವರ ಮನೆತನದ ಹೆಸರೇ ಆಗಿಬಿಟ್ಟಿದೆ.


ಮಗು ಹುಟ್ಟಿದಾಗ ತಂದೆ ತಾಯಿಯರು ಎಷ್ಟೆಲ್ಲಾ ರಿಸರ್ಚ್ ಮಾಡ್ತಾರೆ ಅಂದ್ರೆ ಯಾರೂ ಯಾರ ಮಕ್ಕಳಿಗೂ ಹೆಸರಿಡದ ಹೆಸರನ್ನು ಅವರ ಮಕ್ಕಳಿಗೆ ಇಡಬೇಕೆಂಬ ಬಯಕೆ ಅವರಿಗೆ. ಈ ಸುಸಂದರ್ಭದಲ್ಲಿ ಎಷ್ಟೆಲ್ಲಾ ಓದುತ್ತಾರೆ ಅಂದರೆ ಸಂಸ್ಕೃತ, ಕನ್ನಡ ನಿಘಂಟುಗಳನ್ನು ನಾಲ್ಕಾರು ಬಾರಿಯಾದರೂ ಓದಿ ಒಂದೊಳ್ಳೆಯ ಹೆಸರಿಡುತ್ತಾರೆ. ಕೆಲವರು ಪೌರಾಣಿಕ ಹೆಸರುಗಳನ್ನು ಸೂಚಿಸುತ್ತಾರೆ. ನಾಮಕರಣ ಮಾಡುತ್ತಾರೆ - ಉದಾಹರಣೆಗೆ ಸರಯೂ (ಅಯೋಧ್ಯೆ ನಗರಿಯಲ್ಲಿ ಹರಿಯುವ ನದಿಯ ಹೆಸರು), ಪರೀಕ್ಷಿತ,  ಪ್ರಹ್ಲಾದ, ಭೀಮ, ಅರ್ಜುನ, ಕೃಪಾ..... ಮತ್ತೆ ಕೆಲವರು ಈಗಾಗಲೇ ಹೆಸರು ಮಾಡಿದ ಹಿರಿಯ ಚೇತನರ ಹೆಸರನ್ನು ಅವರ ಮಕ್ಕಳಿಗೆ ನಾಮಕರಣ ಮಾಡುತ್ತಾರೆ. ನರೇಂದ್ರ (ಸ್ವಾಮಿ ವಿವೇಕಾನಂದ ರ ಮೊದಲಿನ ಹೆಸರು), ಕೆಂಪೇ ಗೌಡ, ಮೋಹನದಾಸ (ಗಾಂಧೀಜಿ ಯ ಮೂಲ ಹೆಸರು)...... ಹೀಗೆ. ಕೊನೆಯದಾಗಿ ಒಂದು ವರ್ಗದ ಜನರಿದ್ದಾರೆ ಹೆಸರಿನ ಮೊದಲ ಹೆಸರನ್ನಷ್ಟೇ  ( call name ) ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬದಲಿಗೆ ಅವರ ಪೂರ್ಣ ನಾಮವನ್ನೇ ಹೆಸರಾಗಿಸಿಬಿಡುತ್ತಾರೆ. ಶೃಂಗೇರಿ ಮೂಲದ ಕೆ.ವಿ. ರವೀಂದ್ರನಾಥ ಟಾಗೋರ್ ಎಂಬ ಹೆಸರಿನ ಡಿ.ಜಿ.ಪಿ ಒಬ್ಬರಿದಾರೆ ಅಂತ ಗೊತ್ತಿತ್ತಾ? ಕೆಲವರು ರಾಮ್ ಮನೋಹರ್ ಲೋಹಿಯ (ಸೋಷಿಯಲಿಸ್ಟ್ ನಾಯಕ), ಎಂ.ಕೆ.ಗಾಂಧಿ, ಅಂಬೇಡ್ಕರ್, ನೆಹರು ಅಂತೆಲ್ಲಾ ಹೆಸರಿಟ್ಟು ಕೊಂಡಿರುತ್ತಾರೆ ಅಂತ ನನಗು ಸ್ವಲ್ಪ ವರ್ಷದ ಹಿಂದೆ ತಿಳಿಯಿತು. ಪುಣ್ಯಕ್ಕೆ 'ಗಾಂಧೀಜಿ' ಅಂತಲೋ 'ಮಹಾತ್ಮಾ ಗಾಂಧಿ' ಅಂತಲೋ ಹೆಸರಿಟ್ಟುಕೊಂಡಿಲ್ಲ ನೋಡಿ.....

ಅದಿರಲಿ ನಾನು ಚಿಕ್ಕ ವಯಸ್ಸಿನಿಂದಲೂ ಈ ಪ್ರಶ್ನೆ ನನ್ನಲ್ಲಿತ್ತು. ಯಡಿಯೂರಪ್ಪ ಅಂತ ಹೆಸರು ಅವರ ಪೋಷಕರು ಯಾಕೆ ಇಟ್ಟ್ರು, ಮುಂಚೆ ಎಲ್ಲೂ ಈ ಹೆಸರನ್ನು ಕೇಳೆ ಇಲ್ಲವಲ್ಲ? ಕಡೆಗೆ ತಿಳಿಯಿತು ಅವರ ಕುಟುಂಬ ಯಡಿಯೂರು ಸಿದ್ಧಲಿಂಗೇಶ್ವರನ ಭಕ್ತರೆಂದು. ನಮ್ಮ ಮಾಜಿ ಮುಖ್ಯಮಂತ್ರಿಯೊಬ್ಬರ ಹೆಸರೊಂದೇ ಆಗಿತ್ತು. ಹೆಸರು ಹಾಗು ವ್ಯಕ್ತಿ ಎರಡೂ patented ಆಗಿಬಿಟ್ಟಿತ್ತೇ? ಇನ್ಯಾರಿಗೂ ಈ ಹೆಸರು ಇಟ್ಟಿದ್ದನ್ನು ನಾನು ನೋಡಿರಲಿಲ್ಲ ಇನ್ನಂತು ಖಡಾಖಂಡಿತವಾಯಿತು. ಯಾರೂ ಯಡಿಯೂರಪ್ಪನವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಾರೆಂದು ನಾನು ನಂಬುವುದಿಲ್ಲ. ಭ್ರಷ್ಟ, ಅಧಿಕಾರ ದಾಹಿ, ಧನದಾಹಿ, ಸ್ವಜನ ಪಕ್ಷಪಾತಿ ಎಂಬ ನಾನಾ ವಿಷೇಷಣಗಳಿಗೆ "ಯಡಿಯೂರಪ್ಪ" ಎಂಬ ಹೊಸ ಪದ ನಿಘಂಟಿಗೆ ಸೇರಿಕೊಳ್ಳುತ್ತದೋ ನೋಡಬೇಕು. ಹಾಗಾದರೆ ಅದಕ್ಕಿಂತ ಅವಮಾನಕರ ಸಂಗತಿ ಮತ್ತೊಂದಿಲ್ಲ.

ನೀವು Vanity Search, Ego surfing ಬಗ್ಗೆ ಕೇಳಿದ್ದೀರಾ? ನಿಮ್ಮ ಹೆಸರನ್ನು ಗೂಗಲ್ ನಲ್ಲಿ ಟೈಪಿಸಿ ಅಲ್ಲೊಂದು ಹುಡುಕಾಟ ನಡೆಸಿ. ಎಷ್ಟು ಪುಟಗಳು ಹುಟ್ಟುಕೊಳ್ಳುತ್ತವೆ ಗಮನಿಸಿ. ಅದಕ್ಕೆ ಕೊಟ್ಟಿರುವ ಹೆಸರೇ ವ್ಯಾನಿಟಿ ಸರ್ಚ್. ನನ್ನ ಹಳೆಯ ಕಂಪನಿಯ ಪ್ರಬಂಧಕರಾದ ಮಹಾಂತ್ ಶೆಟ್ಟಿ, ಹಾಗು ಈಗಿನ ಕಂಪನಿಯ ಹಿರಿಯ ಆದ  Senior Research Engineer ಮದಬೂಸಿ ಗೋವಿಂದರಾಜನ್ ಸಹಿತ ವ್ಯಾನಿಟಿ ಸರ್ಚ್ ಅನ್ನು ಅನುಮೋದಿಸುತ್ತಾರೆ. ಆದರೆ ಮತ್ತೆ ಕೆಲವರು ವಾದಿಸುತ್ತಾರೆ - ಹೆಸರು ಮಾಡಬೇಕೆಂದು ಸಾಧನೆ ಮಾಡುವುದು ಯಾವ ನ್ಯಾಯ ಎಂದು.........................
 
ಹೆಸರಲ್ಲೇನಿದೆ ರೀ???

ಇಂತಿ ನಿಮ್ಮವ,

ಪ್ರಕೊಪ

Monday, July 25, 2011

ಯಲಹಂಕದಲ್ಲಿ ಐ.ಟಿ. ಮಿಲನ್ ಆರಂಭ!!!!





ಯಲಹಂಕದಲ್ಲಿ ಶಾಖೆ ಪುನಃ ಪ್ರಾರಂಭವಾಗಿದೆ. ಐಟಿ ಮಿಲನ್ ಹೆಸರಿನಲ್ಲಿ ಭಾನುವಾರ ೮ ಸ್ವಯಂಸೇವಕರು ಸೇರಿದ್ದೆವು. ನಿತ್ಯ ಶಾಖೆಗಳು ಕ್ರಮೇಣ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ - ಜನರಿಗೆ ಶಾಖೆಯ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಯಿತೋ, ಜನರಿಗೆ ದಿನದಲ್ಲಿ ಒಂದು ಗಂಟೆಯನ್ನೂ ಮೀಸಲಿಡದಷ್ಟು ubiquitous ಆದರೋ, ಮಕ್ಕಳೋ ಗ್ರಾಮೀಣ ಆಟಗಳಲ್ಲಿ ದೇಹದಾಡ್ಯತೆ ಬೆಳೆಸಲಾಗುವುದಿಲ್ಲ ಕೇವಲ ಫುಟ್ಬಾಲ್ ಕಿಕ್, ವಾಲಿಬಾಲ್ ಸ್ಮಾಶ್, ಕ್ರಿಕೆಟ್ ಶಾಟ್ ನಲ್ಲಿ ಮಜಸಿಗುತ್ತದೆಂದು ಭಾವಿಸಿದ್ದಾರೋ ಗೊತ್ತಿಲ್ಲ. ಇವೆಲ್ಲವನ್ನು ಮರೆಮಾಚಿಸುವ ಕಾಂಪೆಟಿಷನ್ ಯುಗದಲ್ಲಿ ಮಕ್ಕಳಿಗೆ ಆಟಕ್ಕೆ ಟೈಮ್ ಸಿಗುತ್ತಿರುವುದೇ ಹೆಚ್ಚು - ಶಾಲಿಯಲ್ಲಿ ಓದಬೇಕು, ಮನೆಗೆ ಬಂದು ಓದಬೇಕು, ತದನಂತರ ಟ್ಯೂಷನ್, ಅಮೇಲೆ ಸಂಗೀತ-ಕೊಳಲು,ಪಿಟೀಲು, ಗಿಟಾರ್ ಅಂತ ಒಂದು ವಾದ್ಯ ಕಲಿಯಬೇಕು....... ಇಷ್ಟೆಲ್ಲಾ ಆದಮೇಲೆ ಒಂದು ಗಂಟೆ ಎಲ್ಲಿ ಸಿಗಬೇಕು??? ಮತ್ಯಾರೋ ವಿಜ್ಞಾನಿ ಬಂದು ದಿನಕ್ಕೆ ೨೪ ಗಂಟೆ ಇದೆ ಎಂದು ನಿಮ್ಮನ್ನು ಇಷ್ಟು ದಿನ ರೈಲು ಹತ್ತಿಸಿದ್ದಾರೆ ದಿನದಲ್ಲಿ ೩೦ ಗಂಟೆಗಳಿವೆ ಎಂದು re-calculate ಮಾಡಿ ಹೇಳಿದರೆ ಮಕ್ಕಳಿಗೆ ಕಾರ್ಟೂನ್ ನೆಟ್ವರ್ಕ್, ಪೋಗೋ ನೋಡಿ, ಮತ್ತೆರಡು ಗಂಟೆ ನಿದ್ದೆ ಸಿಕ್ಕಿದಮೇಲೆ ಅರ್ಧ ಗಂಟೆ ಸಿಗಬಹುದು ಶಾಖೆಗಾಗಿ ಮೀಸಲಿಡಲು. ವಾರದ ಐದೂ ದಿನಗಳು busy ಆಗಿದ್ದು ವಾರಂತ್ಯದಲ್ಲಿ ಶಾಖೆಗಾಗಿ ಮೀಸಲಿಡುವ ಸಲುವಾಗಿಯೇ ಐ.ಟಿ.ಮಿಲನ್ ಪ್ರಾರಂಭವಾಗಿದ್ದು. ಇಲ್ಲಿ ಕಟ್ಟು ನಿಟ್ಟಿನ ಸಮವಸ್ತ್ರ advocate ಮಾಡುವುದಿಲ್ಲ - ಸಂಘದ ಸಮವಸ್ತ್ರ ನಿಮಗೆ ಗೊತ್ತಿರಬಹುದು - ಕಪ್ಪು ಟೊಪ್ಪಿ, ಬಿಳಿ ಬಣ್ಣದ ಅಂಗಿ, ಕಾಖಿ ಬಣ್ಣದ ಚೊಣ್ಣ, ಕಂದು ಬಣ್ಣದ ಕಾಲುಚೀಲ, ಕರೀ ಬೂಟು, ಕೈಲೊಂದು ದಂಡ. ಇವ್ಯಾವುದೂ ಇಲ್ಲದೇ ನಿಮಗಿಷ್ಟವಾದ ಬಟ್ಟೆ ಧರಿಸಿ ಬನ್ನಿ ಎಂದು ಐ.ಟಿ.ಮಿಲನ್ ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹಾಗು ಇತರರಿಗೆ ಅಹ್ವಾನಿಸುತ್ತದೆ. ಆದರೂ ಸಂಘದ typical ಸಮವಸ್ತ್ರದಲ್ಲಿ ವಿಜಯದಶಮಿಯ ದಿನ ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ!!!!!
ಮೈಸೂರಿನಲ್ಲಿ ಇಂಥಹದ್ದೇ ಶಾಖೆ ನೋಡುವ ಭಾಗ್ಯ ನನ್ನದಾಗಿತ್ತು - ರಶ್ಮಿ ರಾಜೇಶ ರ ಮದುವೆ ನಡೆದ ಕಲ್ಯಾಣ ಮಂಟಪದ ಎದುರಿದ್ದ ದೊಡ್ಡ ಮೈದಾನದಲ್ಲಿ ಒಂದಷ್ಟು ಹುಡುಗರು ಸಾಂಘಿಕ್ ನಡೆಸುತ್ತಿದ್ದರು. ಸಾಂಘಿಕ್ ನಡೆದ ಬಳಿಕ ಅವರನ್ನು ಮಾತನಾಡಿಸಲು ಹೊರಟಾಗ "ನಮಸ್ತೆ" ಕೇಳಿಸಲೇ ಇಲ್ಲ, ನನ್ನ ಕನ್ನಡದ ಪ್ರಶ್ನೆಗಳಿಗೆ ಇಂಗ್ಲಿಷ್ ನಲ್ಲಿ ಉತ್ತರ, ರೀಬಾಕ್ - ಅಡಿದಾಸ್ ಶಿರ್ಟ್ ಧರಿಸಿದವರು ಬಾಯ್ ಡೂಡ್ ಎಂದು ಹೇಳಿ ಹೊರಟರು. ಸಂಘದಲ್ಲಿ ವಿದಾಯ ಹೇಳುವುದು "ರಾಮ್ ರಾಮ್" ಎಂದು. ನನ್ನ ಬಾಯಲ್ಲಿ ರಾಮ್ ರಾಮ್ ಬಂತಾದರೂ ಬಾಯ್ ಡೂಡ್ ನನ್ನನ್ನು ಮೂಕವಿಸ್ಮಿತನಾಗಿ ಮಾಡಿತ್ತು. ಕಡೆಗೆ ನಾನೇ ಸಮಾಧಾನ ಪಟ್ಟುಕೊಂಡೆ. ಬದಲಾವಣೆ ಒಳ್ಳೆಯದಕ್ಕೇ ಇರಬೇಕೆಂದು........


ನೆನ್ನೆ ವಿನಯ್ ಜಿ, ಸಾಗರ್ ಜೀ, ಚೇತನ್, ಅನೂಪ್, ಧ್ವಜ ಪ್ರಣಾಮ್ ಮಾಡುತ್ತಿರುವಂತೆಯೇ  ಜಗದೀಶ್ ಜೀ, ಹರೀಶ್ ಹಾಗು ನಾನು ಮಂಡಲಕ್ಕೆ ಪ್ರಣಾಮ್ ಮಾಡಿ ಸೇರಿಕೊಂಡೆವು. ಲಘು ವ್ಯಾಯಾಮ್, ಸೂರ್ಯನಮಸ್ಕಾರ್, ಗೀತಯ ಬಳಿಕ, ಒಂದೆರೆಡು ಆಟಗಳು - ರೈತ ನರಿ, ಹುಲಿ ಕುರಿ ಆಟಗಳನ್ನಾಡಿ ಸಂತೋಷ ಪಟ್ಟೆವು. ವರ್ಷದಲ್ಲಿ RSS ಶಾಖೆಗಳಲ್ಲಿ ಆರು ಮುಖ್ಯ ಹಬ್ಬಗಳೆಂದರೆ - ಯುಗಾದಿ, ಗುರು ಪೂರ್ಣಿಮೆ, ಹಿಂದು ಸಾಮ್ರಾಜ್ಯೋತ್ಸವ (ಶಿವಾಜಿ ಮಹರಾಜ್ ಚತ್ರಪತಿಯಾದ ದಿವಸ) ರಕ್ಷಾ ಬಂಧನ, ವಿಜಯದಶಮಿ, ಸಂಕ್ರಮಣ. ನೆನ್ನೆಯ ಐ.ಟಿ ಮಿಲನ್ ನಲ್ಲಿ ನೆನ್ನೆ ಗುರು ಪೂರ್ಣಿಮೆಯ ದಿವಸವಾಗಿದ್ದು, ಸಾಗರ್ ಜೀ ಯವರ ಬೌದ್ಧಿಕ್ ಏರ್ಪಾಟಾಗಿತ್ತು. ಸಂಘದಲ್ಲಿ ಗುರುವಿಗಿರುವ ಮರ್ಯಾದೆ, (ಸಂಘದಲ್ಲಿ ಗುರು ಎಂದರೆ ಭಾಗವ ಧ್ವಜ ಏಕೆಂದರೆ ಅದು ಅಮರ. ಮನುಷ್ಯನನ್ನು ಗುರು ಮಾಡಿಕೊಂಡರೆ ಅದಕ್ಕೊಂದು ಆಯಸ್ಸು ಇರುತ್ತದೆ ಆದರೆ ಭಾಗವ ಅಮರವೆಂದು ಡಾ|| ಹೆಡಗೇವಾರ್ - ಸಂಘದ ಸಂಸ್ಥಾಪಕರು ಭಾಗವ ಧ್ವಜವನ್ನು ಗುರು ಸ್ಥಾನದಲ್ಲಿ ಇರಿಸಿದರು), ನಮ್ಮ ಜೀವನದಲ್ಲಿ ಗುರುವಿಗಿರುವ ಮಹತ್ವವನ್ನು ಹೇಳಿದರು. ತದನಂತರ "ನಮಸ್ತೇ ಸದಾ ವತ್ಸಲೇ ಮಾತೃಭೂಮೆ....... " ಪ್ರಾರ್ಥನೆ, ಅಮೃತವಚನ, ಪಂಚಂಗ ಪಠಿಸಿ ಸಂಪರ್ಕಕ್ಕೆ ಹೊರಟೆವು.

  ಬಾಲ್ಯದಿಂದಲೂ ಸ್ವಯಂಸೇವಕ ಎಂಬ ಹಣೆಪಟ್ಟಿ  ರಕ್ಷಾ ಬಂಧನದಲ್ಲೋ, ಗುರುಪೂರ್ಣಿಮೆ ಉತ್ಸವದಲ್ಲೋ ಹೇಳುವ ಪರಿಪಾಠ ಇದ್ದಿತಾದರೂ, ತದನಂತರ ಶಾಖೆಯಕಡೆ ಮುಖ ಮಾಡದೇ ಇರುವುದು ನಮ್ಮಲ್ಲಿ ಹಲವರ ಅನುಭವ. ನನ್ನದಂತೂ ಇದೇ ಅನುಭವ. ತಾಯಿಯ ಮನೆಯಲ್ಲಿ ಅಜ್ಜ, ಮಾವ ಆರ್ ಎಸ್ ಎಸ್ ಕಟ್ಟಾಳುಗಳು. ಹಾಗೆಯೇ ನನ್ನ ದೊಡ್ಡಪ್ಪ, ಅಜ್ಜ ಮಾವನನ್ನು compete ಮಾಡುವಷ್ಟು ಸಂಘದ  dedicated ಸ್ವಯಂಸೇವಕರು. ನನ್ನ ತಂದೆಯೂ ಬೆಂಗಳೂರಿಗೆ ಬರುವ ವರೆಗೂ ಸಂಘದ ಸಂಪರ್ಕದಲ್ಲಿದ್ದವರು. ನನ್ನ ಪ್ರಕಾರ ತೀರ್ಥಹಳ್ಳೀಯಲ್ಲಿ ಅಪ್ಪ ಕಾರ್ಯವಾಹರೋ, ವಲಯದ ಪ್ರಮುಖರೋ ಆಗಿದ್ದವರು. ಬೆಂಗಳೂರಿಗೆ ಬಂದ ಮೇಲೆ, ಎಸ್ಕಾರ್ಟ್ಸ್ ನಲ್ಲಿ management ರೋಲ್ ನಲ್ಲಿ ಬಂದ ನಂತರ ಸಂಘದ ಸಂಪರ್ಕ ಕಡಿಮೆಯಾಯಿತು. ಕಾರಣ ಊಹಿಸಬಲ್ಲಿರಿ. ಹೌದು managementನಲ್ಲಿದ್ದುಕೊಂಡು trade union ಗಳ ಜೊತೆ ಗಲಾಟೆಗಳು ರಂಪಗಳು ಅಪ್ಪನಿಗೆ ಇಷ್ಟವಿರಲಿಲ್ಲ. ಅವರೋ ತಮ್ಮ ಕೆಲಸದಲ್ಲಿ ನಿಷ್ಟೆ ಇಟ್ಟುಕೊಂಡವರು.

ಅಪ್ಪನ, ದೊಡ್ಡಪ್ಪನ ಸ್ನೇಹಿತರದ ಮತ್ತೊಬ್ಬ ಹಿರಿಯ ಸಂಘದ ಕಾರ್ಯಕರ್ತರೆಂದರೆ ಪ್ರಕಾಶ್ ಶೆಣೈ. (ಪ್ರಕಾಶ್ ಮಾಮಾ). ಇವರು ಕೆನರಾ ಬ್ಯಾಂಕ್  ನಲ್ಲಿದ್ದುಕೊಂಡು ಸಂಘದ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು - ಪ್ರದೀಪ್ ಶೆಣೈ ಹಾಗು ರಾಮನಾಥ್ ಶೆಣೈ(ನನ್ನ ಓರಗೆಯವನು) ಕೆಲಕಾಲ ಯಲಹಂಕದಲ್ಲಿದ್ದಾಗ ಸಂಘಕ್ಕೊಂದು ಮೆರಗು ತಂದಿದ್ದರು. ಪ್ರದೀಪ್ ಮುಖ್ಯ ಶಿಕ್ಷಕ್ ಆಗಿದ್ದ. ಅವನ ಅನುಪಸ್ಥಿತಿಯಲ್ಲಿ ನಾನು ಮುಖ್ಯ ಶಿಕ್ಷಕ್ ಆಗಿರುತ್ತಿದ್ದೆ. ಉಳಿದಂತೆ ನಿತ್ಯ ಶಾಖೆಗೆ ಪ್ರಾರ್ಥನಾ ಪ್ರಮುಖ್ ಸಹಿತ ನಾನೇ ಆಗಿದ್ದೆ. ನನ್ನ ಪ್ರಾರ್ಥನಾ ಶೈಲಿ ಬದಲಾದದ್ದು ಶ್ರೀ ದ ಮ ರವೀಂದ್ರ ಜೀ ಎಂಬ ಹಿರಿಯ ಪ್ರಚಾರಕರು ನಮ್ಮ ಶಾಖೆಗೆ ಭೇಟಿ ಕೊಟ್ಟಾಗಲೇ. ಈ ಬದಲಾದ ಶೈಲಿಯ ಪ್ರಾರ್ಥನೆಯನ್ನೇ ನೆನ್ನೆ ನಾನು ಪ್ರಾರ್ಥನ ಪ್ರಮುಖ್ ಆಗಿ ಪ್ರಾರ್ಥನೆ ಹೇಳಿಕೊಟ್ಟೆ......................

ಯಲಹಂಕದಲ್ಲಿ ವಾಸ ಇರುವವರು ದಯಮಾಡಿ ಐ.ಟಿ ಮಿಲನ್ ಗೆ ಬನ್ನಿ. ಇದು ನಡೆಯುವುದು ಪ್ರತಿ ಭಾನುವಾರ ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ, ವಿವೇಕ ಬಾಲ ಮಂದಿರ ಶಾಲಾ ಆವರಣದಲ್ಲಿ.
ಮೇಲ್ಹೇಳಿದ ಎಷ್ಟೋ ಪದ ಪ್ರಯೋಗಗಳು ನಿಮಗೆ ಹೊಸತೆನಿಸಿದಲ್ಲಿ ಇಲ್ಲಿದೆ  glossary

ಶಾಖೆ -  RSSನ ಸ್ವಯಂಸೇವಕರು ಭೇಟಿಯಾಗುವ, ಗೀತೆ, ವ್ಯಾಯಾಮ, ಆಟ, ಬೌದ್ಧಿಕ್ ನಡೆಯುವ ಕಾರ್ಯಕ್ರಮ
ಪ್ರಾತಃ ಶಾಖೆ - ಬೆಳಿಗ್ಗೆ ನಡೆಯುವ ಶಾಖೆ
ಸಾಯಂ ಶಾಖೆ - ಸಾಯಂಕಾಲ ನಡೆಯುವ ಶಾಖೆ
ಸಾಂಘಿಕ್ - ಭಾನುವಾರ ನಡೆಯುವ ಶಾಖೆ. ಈ ಶಾಖೆಯಲ್ಲಿ ಸಾಧಾರಣವಾಗಿ ಒಂದೇ ಊರಿನಲ್ಲಿ ನಡೆಯುವ ಮೂರ್ನಾಲ್ಕು ಶಾಖೆಗಳು ಸೇರಿ ನಡೆಸುವ ದೊಡ್ಡ ಮಟ್ಟದ ಶಾಖೆ.
ಬೌದ್ಧಿಕ -  Discussion / ಭಾಷಣ ಎಂದು ಬಹಳ simple ಆಗಿ ಭಾಷಾಂತರಿಸಬಹುದು.
ಮುಖ್ಯ ಶಿಕ್ಷಕ - ಶಾಖೆಯ ಶಿಸ್ತು (ಶಿಸ್ತು ಶಾಖೆಯ ಮೂಲ ಮಂತ್ರ) ನೋಡಿಕೊಳ್ಳುವ Leader
ಸಂಪರ್ಕ ಹೋಗುವುದು - ಹೆಚ್ಚು ಜನರನ್ನು ಶಾಖೆಗೆ ಬರುವಂತೆ ಮಾಡಲೋಸುಗ ಸ್ನೇಹಿತರ ಮನೆಗಳಿಗೆ ಹೋಗಿ ಮಾತನಾಡಿಸಿ ಶಾಖೆಗೆ ಬರುವಂತೆ ಮಾಡುವುದು.

Saturday, July 9, 2011

ತಪ್ಪಾಗಿದೆ ಅಂತ ನಾನು ನಂಬುತ್ತೇನೆ, ತಿದ್ದಿಕೊಳ್ಳುವುದು ನಿಮಗೆ ಬಿಟ್ಟದ್ದು.........


"ಕನ್ನಡ ಪ್ರಭ" ದಲ್ಲಿ ಜುಲೈ ೬ ನೇ ತಾರೀಖು ಒಂದು ವಿಶೇಷ ಪತ್ರಗಳ ಅಂಕಣ ಪ್ರಕಟವಾಗಿತ್ತು. ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡ್ಯೂರಪ್ಪ ನವರಿಗೆ ಶಾಲಾ ಮಕ್ಕಳು ಕಾಗದಗಳನ್ನು ಬರೆದು ಸಿ.ಎಂ ಆಗಿ ಬಿ.ಎಸ್.ವೈ ಮಾಡುತ್ತಿದ್ದ ಲಜ್ಜೆಗೇಡಿತನವನ್ನು ಎತ್ತಿಹಿಡಿಯುವ ಮುದ್ದಾದ ಲೇಖನಗಳು ಅವು. ಈ ಪತ್ರಗಳು  ಪತ್ರಿಕೆಯ ಮೊದಲನೆಯ ಪುಟದಲ್ಲಿ ಪ್ರಕಟಿಸಿದ್ದರು. ತದನಂತರ ಮೂರನೆಯ ಪುಟದಲ್ಲಿ ಸಿ.ಎಂ "ಶಾಲಾ ವಾಸ್ತವ್ಯ"ದ ಬಗ್ಗೆ ಒಂದು ವರದಿ ಪ್ರಕಟವಾಗಿತ್ತು. ಅದರ ಜೊತೆಗೆ, ಎರಡು  ಫೋಟೋಗಳು ಪ್ರಕಟವಾಗಿತ್ತು. (Maja.jpg , Saja.jpg) ಈ ಫೋಟೊ ಜೊತೆಗಿದ್ದ ಅಡಿಬರಹವನ್ನು ಕುರಿತು ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ ಪತ್ರವೊಂದು ಬರೆದಿದ್ದೆ. ಆ ಪತ್ರವೇ ೯ನೇ ಜುಲೈ ಕನ್ನಡಪ್ರಭ ದ "ತಪ್ಪಾಯ್ತು ತಿದ್ಕೊತೀವಿ" ಅಂಕಣದಲ್ಲಿ ಪ್ರಕಟವಾಯ್ತು.

'ತಪ್ಪಾಯ್ತು ತಿದ್ಕೊತೀವಿ' ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ ಅನಿಸುತ್ತೆ. ಶೀರ್ಷೆಕೆಯೇ ಹೇಳುವಂತೆ, ಹಿಂದಿನ ಸಂಚಿಕೆಗಳಲ್ಲಿ ತಪ್ಪಾಗಿ ಪ್ರಕಟವಾದದ್ದನ್ನು ಸಾಮಾನ್ಯವಾಗಿ ಎಲ್ಲಾ ಪತ್ರಿಕೆಗಳು ಒಂದು ಪುಟ್ಟ ಬಾಕ್ಸ್ ಐಟಮ್ ಆಗಿ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತಾರೆ. ಆದರೆ ಭಟ್ಟರು, "ಕನ್ನಡ ಪ್ರಭ" ದ ಲಗಾಮು ಹಿಡಿಯುತ್ತಿದ್ದಂತೆ ಅದಕ್ಕೆ ಒಂದು ಕಾಲಂ ಮೀಸಲಿಟ್ಟರು. ಯಾರಿಗೂ ಗೊತ್ತಾಗದೇ ನುಸುಳುವ ತಪ್ಪುಗಳನ್ನು ತಿದ್ದುತ್ತಾ, ಮುಂದಿನ ಸಂಚಿಕೆಗಳಲ್ಲಿ ಅದೇ ತಪ್ಪುಗಳ ಪುನರಾವರ್ತನೆ ಆಗದಂತೆ "ಕನ್ನಡ ಪ್ರಭ" ಒಂದು ಒಳ್ಳೆಯ ಪ್ರಯತ್ನ ಮಾಡುತ್ತಿದೆ.......

ಪತ್ರವನ್ನು ಓದಿ ಮನ್ನಣೆ ನೀಡಿ ಪ್ರಕಟಿಸಿದ ಭಟ್ಟರಿಗೆ ನಾನು ಆಭಾರಿ :-)